ಬಸವಕಲ್ಯಾಣದಲ್ಲಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಗುರುವಾರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಇಷ್ಟಲಿಂಗ ಮಹಾಪೂಜೆ ಕೈಗೊಂಡ ಬಳಿಕ ಮಾತನಾಡಿದರು.
ಬಸವಕಲ್ಯಾಣ: ‘ಜಗಜ್ಯೋತಿ ಬಸವೇಶ್ವರರಿಗೆ ಜಂಗಮರೆಂದರೆ ಪಂಚಪ್ರಾಣ. ಕಾಶ್ಮೀರದಿಂದ ಜಂಗಮರನ್ನು ಅವರು ಕರೆತಂದರು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದ್ದಾರೆ.
ನಗರದ ಬಿಕೆಡಿಬಿ ಸಭಾಂಗಣದಲ್ಲಿ ಗುರುವಾರ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆಯಲ್ಲಿ ಅವರು ಮಾತನಾಡಿದರು.
‘ಗುರು ಮತ್ತು ಜಂಗಮ ಒಂದೇ ಎನ್ನಬಹುದು. ಸಿದ್ಧಾಂತ ಶಿಖಾಮಣಿಯಲ್ಲಿ ಈ ಇಬ್ಬರಲ್ಲಿ ಭೇದಭಾವ ಮಾಡಕೂಡದು ಎನ್ನಲಾಗಿದೆ. ಬಸವೇಶ್ವರ ಅವರೇ ನಮ್ಮನ್ನು ಈ ನಾಡಿಗೆ ಕರೆಯಿಸಿ, ಕ್ರಾಂತಿಯ ನೆಲವನ್ನು ಶಾಂತಿಯ ಬೀಡು ಆಗಲೆಂದು ಬಯಸಿದ್ದಾರೆಂದೇ ಕಾರ್ಯಕ್ರಮದ ಸಂಭ್ರಮ ಕಂಡು ನಮಗೆ ಅನಿಸುತ್ತಿದೆ. ಈ ಸ್ಥಳವನ್ನು ನಮ್ಮ ತವರು ಮನೆ ಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಹುಟ್ಟಿಕೊಂಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಪಾದಪೂಜೆ ಮೂಢನಂಬಿಕೆಯಲ್ಲ. ಅದಕ್ಕೆ ವೈಜ್ಞಾನಿಕ ಕಾರಣವಿದೆ. ಗುರುವಿನ ಪಾದದಲ್ಲಿ ಅವರ ತಪಸ್ಸಿನ ವಿಶಿಷ್ಟ ಶಕ್ತಿ ಇರುತ್ತದೆ. ಈ ಬಗ್ಗೆ ಅಪಪ್ರಚಾರ ಸಲ್ಲದು’ ಎಂದರು.
ಸಿದ್ಧಮಲ್ಲ ಶಿವಾಚಾರ್ಯರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.