ADVERTISEMENT

ಹುಲಸೂರು: ರಸ್ತೆ ಪಕ್ಕ ಗಿಡಗಂಟಿ; ಸಂಚಾರಕ್ಕೆ ಅಡ್ಡಿ

ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು: ಪ್ರಯಾಣಿಕರ ಆತಂಕ, ತೆರವಿಗೆ ಆಗ್ರಹ.

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:23 IST
Last Updated 16 ಜನವರಿ 2026, 7:23 IST
ಹುಲಸೂರು ಸಮೀಪದ ಮೇಹಕರ - ಕೊಂಗಳಿ ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಮುಳ್ಳು ಕಂಟಿ ಬೆಳೆದಿರುವುದು
ಹುಲಸೂರು ಸಮೀಪದ ಮೇಹಕರ - ಕೊಂಗಳಿ ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಮುಳ್ಳು ಕಂಟಿ ಬೆಳೆದಿರುವುದು   

ಹುಲಸೂರು: ಪಟ್ಟಣ ಸೇರಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲಿ ಗಿಡಗಂಟಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ವಾಹನ ಸವಾರರಿಗೆ ಅಡೆತಡೆ ಆಗುತ್ತ, ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ದೂರು ಚಾಲಕರಿಂದ ಕೇಳಿ ಬರುತ್ತಿದೆ.

ತಾಲ್ಲೂಕು ಕೇಂದ್ರದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಎರಡೂ ಬದಿಗಳಲ್ಲಿ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದಿದ್ದು ವಾಹನ ಚಾಲಕರು ಪರದಾಡುತ್ತಿದ್ದಾರೆ. ಅಳವಾಯಿ, ಮೇಹಕರ, ವಾಂಝರಖೆಡಾ, ಸಾಯಗಾಂವ ಮಾರ್ಗವಾಗಿ ಪಟ್ಟಣಕ್ಕೆ ಬರುವ ರಸ್ತೆ, ಪಟ್ಟಣದಿಂದ ಕೊಂಗಳಿ ಗ್ರಾಮಕ್ಕೆ ಹೋಗುವ ರಸ್ತೆ, ಪಟ್ಟಣದಿಂದ ದೇವನಾಳ ಮಾರ್ಗವಾಗಿ ಮಾಚನಾಳ ಹೋಗುವ ರಸ್ತೆ, ಹಾಲಹಳ್ಳಿ ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಶ್ರಿಮಾಳಿಯಿಂದ ಮೇಹಕರ ಮಾರ್ಗವಾಗಿ ಕೆಸರ ಜವಳಗಾ ಗ್ರಾಮಕ್ಕೆ ಹೋಗುವ ರಸ್ತೆಗಳು ತಿರುವು ಮುರುವುಗಳಿಂದ ಕೂಡಿದ್ದು, ರಸ್ತೆಯ ಎರಡೂ ಬದಿಗೆ ಹುಲುಸಾಗಿ ಬೆಳೆದಿರುವ ಗಿಡಗಂಟಿಗಳಿಂದ ಪ್ರಯಾಣಿಕರು ಗೊಂದಲಕ್ಕೀಡಾಗುತ್ತಿದ್ದಾರೆ.

‘ತಿರುವ ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಇದರಿಂದ ಬೈಕ್ ಸವಾರರಿಗೆ ಅಪಘಾತಗಳಾಗುತ್ತಿವೆ ಎಂದು ವಾಹನಗಳ ಚಾಲಕರು ತಿಳಿಸಿದರು. ಮೊದಲೇ ಕಿರಿದಾದ ರಸ್ತೆಗಳಿದ್ದು ಅವುಗಳ ಬದಿಗಳಲ್ಲಿ ಹುಲ್ಲು ಕಂಟಿ ಬೆಳೆದಿರುವುದರಿಂದ ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ. ರಸ್ತೆಯ ಶೇ 40 ಭಾಗ ಹುಲ್ಲುಕಂಟಿಗಳಲ್ಲಿ ಮುಚ್ಚಿದೆ.

ADVERTISEMENT

‘ಹುಲ್ಲು ಬೆಳೆದಿದ್ದರಿಂದ ರಸ್ತೆಗಳು ಕಿರು ರಸ್ತೆಗಳಂತಾಗಿವೆ. ನಿತ್ಯವೂ ಸಂಚರಿಸುವ ಚಾಲಕರಿಗೆ ಈ ಮಾರ್ಗದ ಕುರಿತು ಗೊತ್ತಿರುತ್ತದೆ. ಆದರೆ ಅಪರೂಪಕ್ಕೊಮ್ಮೆ ಈ ಮಾರ್ಗದಲ್ಲಿ ಬರುವ ಚಾಲಕರು, ಒಂದು ಕ್ಷಣ ಗೊಂದಲಕ್ಕೀಡಾಗುತ್ತಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಆನಂದ ಪಟ್ನೆ ಆರೋಪಿಸುತ್ತಾರೆ.

ಮಳೆಯಾದರೂ ಬೈಕ್‌ ಸವಾರರು ಸಂಚರಿಸುವಾಗ ಮೈ ತುಂಬ ಕೊಳಚೆ ನೀರಿನ ಸ್ನಾನ ಸಿಡಿಯುತ್ತದೆ. ರಾತ್ರಿ ಸಮಯದಲ್ಲಿ ರಸ್ತೆ ಮೇಲೆ ಹುಲ್ಲು ಕಂಟಿಗಳಿಂದ ವಿಷಜಂತುಗಳು ಓಡಾಡುತ್ತಿರುವುದರಿಂದ ಪ್ರಯಾಣಿಕರು ಆತಂಕದಲ್ಲೇ ಸಂಚಾರ ಮಾಡುವಂತಾಗಿದೆ.

ಅಧಿಕಾರಿಗಳು ತಕ್ಷಣ ಎಚ್ಚೆತ್ತು ರಸ್ತೆ ಪಕ್ಕದ ಹುಲ್ಲು ಕಂಟಿಗಳು ತೆಗೆದು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗಾಗಲೇ ಕೆಲ ಕಡೆ ರಸ್ತೆ ಪಕ್ಕದಲ್ಲಿರುವ ಗಿಡಗಂಟಿ ತೆರವು ಗೊಳಿಸಲಾಗಿದೆ. ಸಂಕ್ರಾಂತಿ ಹಬ್ಬದ ನಂತರ ಇನ್ನು ಈ ಕಾರ್ಯ ಹೀಗೆ ಮುಂದುವರಿಯಲಿದೆ
ಅಲ್ತಾಫ್ ಮಿಯಾ ಎಇಇ ಲೋಕೋಪಯೋಗಿ ಇಲಾಖೆ ಭಾಲ್ಕಿ

ರಸ್ತೆಗಳ ಪಕ್ಕದಲ್ಲಿ ತಾಜ್ಯ

ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಸುಸಜ್ಜಿತ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ಈ ರಸ್ತೆಗಳ ಪಕ್ಕದಲ್ಲಿ ಹಳೆಯ ಕಟ್ಟಡದ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ‘ರಸ್ತೆ ಬದಿ ತ್ಯಾಜ್ಯ ಸುರಿಯುವುದನ್ನು ತಡೆಯುವ ಕಾರ್ಯಕ್ಕೆ ಪಿಡಬ್ಲ್ಯುಡಿ ಮುಂದಾಗಿಲ್ಲ. ವಿವಿಧ ಗ್ರಾಮಗಳಲ್ಲಿ ಅನಧಿಕೃತ ಟೀ ಅಂಗಡಿ ಹಣ್ಣು ಮಾರಾಟದ ಅಂಗಡಿಗಳು ತಲೆಯೆತ್ತಿದ್ದು ಸವಾರರಿಗೆ ಅಪಾಯಕಾರಿಯಾಗಿವೆ. ಈ ಅಂಗಡಿಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಉಳಿದ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತದೆ. ಅಪಾಯ ಸಂಭವಿಸಿದರೆ ಯಾರು ಹೊಣೆ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.