
ಔರಾದ್: ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಫೆ.4ರಂದು ನಡೆಯಲಿರುವ ತಾಲ್ಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ.
ಸಮ್ಮೇಳನದ ಲೋಗೋ ಬಿಡುಗಡೆಯಾಗಿದೆ. ಸ್ಮರಣ ಸಂಚಿಕೆ, ಆಹ್ವಾನ ಪತ್ರಿಕೆ ಸಿದ್ಧಗೊಂಡಿದೆ. ಎಲ್ಲೆಡೆ ಭಿತ್ತಪತ್ರ, ಬ್ಯಾನರ್ ಹಾಕಲಾಗಿದೆ. ಕನ್ನಡಾಭಿಮಾನಿಗಳು ಮನೆ ಮನೆಗೆ ಹೋಗಿ ಆಮಂತ್ರಣ ನೀಡುತ್ತಿದ್ದಾರೆ. ಕೆಲ ಶಿಕ್ಷಕರು ತೊಡಗಿಸಿಕೊಂಡಿದ್ದು, ಸಮ್ಮೇಳನ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ.
ಸಮ್ಮೇಳನ ಅಧ್ಯಕ್ಷರಿಗೆ ಆಹ್ವಾನ: ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಪದಾಧಿಕಾರಿಗಳು ಭಾನುವಾರ ಸಮ್ಮೇಳನ ಅಧ್ಯಕ್ಷ ಮನ್ಮಥ ಡೋಳೆ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದರು.
ಬೀದರ್ ಜಿಲ್ಲೆ ಗಡಿ ಭಾಗದಲ್ಲಿರುವ ಔರಾದ್ ತಾಲ್ಲೂಕಿನಲ್ಲಿ ಕನ್ನಡ ಸಮ್ಮೇಳನ ಅಂದರೆ ಕನ್ನಡಿಗರಿಗೆ ಹೆಮ್ಮೆ ಹಾಗೂ ಗೌರವ. ಹೀಗಾಗಿ ವೈಶಿಷ್ಟ್ಯವಾಗಿ ಸಮ್ಮೆಳನ ಜರುಗಲಿದೆ ಎಂದು ಸುರೇಶ ಚನಶೆಟ್ಟಿ ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, ನಿಕಟಪೂರ್ವ ಅಧ್ಯಕ್ಷ ಶಾಲಿವಾನ ಉದಗಿರೆ, ಅಶೋಕ ಶೆಂಬೆಳ್ಳಿ, ಮಲ್ಲಿಕಾರ್ಜುನ ಟಂಕಸಾಲೆ, ಬಸವರಾಜ ಹಳ್ಳೆ, ಅಂಬಾದಾಸ ನೇಳಗೆ, ವೈಜಿನಾಥ ಬುಟ್ಟೆ, ಆನಂದ ದ್ಯಾಡೆ, ಅಮರ ಸ್ವಾಮಿ ಮತ್ತಿತರರು ಹಾಜರಿದ್ದರು.
ಅದ್ದೂರಿ ಸಮ್ಮೇಳನ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದ್ದು, ಗಡಿ ಭಾಗದ ಸಮಸ್ತ ಕನ್ನಡಿಗರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಶಾಸಕ ಪ್ರಭು ಚವಾಣ್ ಮನವಿ ಮಾಡಿದ್ದಾರೆ.
ಸಮ್ಮೇಳನವು ಕೇವಲ ಒಂದು ಕಾರ್ಯಕ್ರಮವಲ್ಲ. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ಮಹತ್ವದ ವೇದಿಕೆಯಾಗಿದೆ. ಮರಾಠಿ ಮತ್ತು ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿರುವ ಈ ಭಾಗದಲ್ಲಿ ಕನ್ನಡವನ್ನು ಬೆಳೆಸಲು ಸಾಕಷ್ಟು ಪರಿಶ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿಯೇ ಮೊದಲ ಕನ್ನಡ ಭವನ ಔರಾದ್ನಲ್ಲಿ ಆಗಿದೆ. ಇಲ್ಲಿಯ ತನಕ ಒಟ್ಟು 6 ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು, ಇದು 7ನೇ ಸಮ್ಮೇಳನ ಐತಿಹಾಸಿಕವಾಗಲಿ, ಇದಕ್ಕೆ ಎಲ್ಲ ಕನ್ನಡಿಗರ ಸಹಕಾರ ಅಗತ್ಯ’ ಎಂದಿದ್ದಾರೆ.
ಸಮ್ಮೇಳನ ಅಧ್ಯಕ್ಷರ ಪರಿಚಯ
ಔರಾದ್ ಪಟ್ಟಣದಲ್ಲಿ ನಡೆಯಲಿರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಮನ್ಮಥ ಡೋಳೆ ಅವರದ್ದು ಬಡ ಕುಟುಂಬ. ನಾರಾಯಣಪುರ ಗ್ರಾಮದವರಾಗಿದ್ದು ಪ್ರಾಥಮಿಕ ಪ್ರೌಢಶಿಕ್ಷಣವನ್ನು ಔರಾದ್ನಲ್ಲಿ ಕಾಲೇಜು ಶಿಕ್ಷಣ ಬೀದರ್ನಲ್ಲಿ ಮುಗಿಸಿದ್ದಾರೆ. ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಎಂಫಿಲ್ ಪಿಎಚ್ಡಿ ಪೂರೈಸಿದ್ದಾರೆ. ಈಗ ಅವರು ಸ್ಥಳೀಯ ನಾಲಂದಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಿಡಿ ಮಾವು ಚುಟುಕು ಕವನ ಸಂಕಲನ ಬೀದರ್ ಜಿಲ್ಲಾ ದಲಿತ ಸಿರಿ ಸಂಪಾದನೆ ಬಸವೇಶ್ವರ ಮತ್ತು ಡಾ. ಅಂಬೇಡ್ಕರ್ ಅವರ ಚಿಂತನೆಯ ನೆಲೆ-ನಿಲುವು ಕುರಿತು ಸಂಶೋಧನಾ ಗ್ರಂಥ ಹೊರ ತಂದಿದ್ದಾರೆ. ಕೆಲ ಕಾಲ ಕನ್ನಡಪ್ರಭ ಪತ್ರಿಕೆ ವರದಿಗಾರರಾಗಿಯೂ ಸೇವೆ ಸಲ್ಲಿಸಿದ ಅವರು ಅಂಬೇಡ್ಕರ್ ಹಾಗೂ ಬಸವಣ್ಣ ವಿಚಾರಧಾರೆ ಮೈಗೂಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.