ADVERTISEMENT

ನನ್ನ ಅವಧಿಯ ಯೋಜನೆಗಳು ಸ್ಥಗಿತಗೊಳಿಸಿದ ಬಿಜೆಪಿ ಸರ್ಕಾರ: ಎಚ್‌ಡಿಕೆ

ಎಚ್.ಡಿ.ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 2:05 IST
Last Updated 10 ಏಪ್ರಿಲ್ 2021, 2:05 IST
ಬಸವಕಲ್ಯಾಣದ ರೇಣಾ ಓಣಿಯಲ್ಲಿ ಗುರುವಾರ ನಡೆದ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು
ಬಸವಕಲ್ಯಾಣದ ರೇಣಾ ಓಣಿಯಲ್ಲಿ ಗುರುವಾರ ನಡೆದ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು   

ಬಸವಕಲ್ಯಾಣ: ‘ನಾನು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೊಳಿಸಿದ್ದ ಅನೇಕ ಮಹತ್ವದ ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರದ ರೇಣಾ ಓಣಿಯಲ್ಲಿ ಗುರುವಾರ ಆಯೋಜಿಸಿದ್ದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಪ್ರಭಾವಿ ನಾಯಕರಾದ ಬಂಡೆಪ್ಪ ಕಾಶೆಂಪೂರ ಸಹಕಾರ ಸಚಿವ ಆಗಿದ್ದಾಗ ಕಾಯಕ ಹಾಗೂ ಬಡವರ ಬಂಧು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಅವೆಲ್ಲ ನಿಲ್ಲಿಸಿ ಬಡವರಿಗೆ ಮೋಸ ಮಾಡಲಾಗಿದೆ. ನಾನು ಸಾಲ ಮನ್ನಾ ಮಾಡಿದ್ದರಿಂದ ಲಕ್ಷಾಂತರ ರೈತರಿಗೆ ಅನುಕೂಲ ಆಯಿತು. ಆದರೆ, ಈ ಸರ್ಕಾರ ಸಾಲಮನ್ನಾ ಮಾಡುತ್ತಿದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 50 ಮುಸ್ಲಿಂ ಶಾಸಕರು ಆಯ್ಕೆ ಆಗಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕಾಗಿದೆ. ಜಾತಿಯತೆಗೆ ನಾವು ಎಂದೂ ಆಸ್ಪದ ನೀಡುವುದಿಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ನೊಂದಿಗೆ ಸರ್ಕಾರ ರಚನೆ ಮಾಡಿದ್ದೇವು. ಉಪ ಚುನಾವಣೆಯಲ್ಲಿ ಮಸ್ಕಿ, ಬೆಳಗಾವಿಯಲ್ಲಿ ಅಭ್ಯರ್ಥಿ ನಿಲ್ಲಿಸದೆ ಇಲ್ಲಿಯೇ ಏಕೆ ಕಣಕ್ಕೆ ಇಳಿಸಿದ್ದೇವೆ ಎಂಬುದರ ಬಗ್ಗೆ ಅನ್ಯ ಪಕ್ಷದವರು ಇಲ್ಲಸಲ್ಲದನ್ನು ಹೇಳುತ್ತಿವೆ. ಆದರೆ, ನಾವು ಯಸ್ರಬ್ ಅಲಿ ಅವರಿಗೆ ಮೋಸ ಮಾಡಲು ಅಲ್ಲ, ಗೆಲ್ಲಿಸಲು ಟಿಕೆಟ್ ನೀಡಿದ್ದೇವೆ. ಆದ್ದರಿಂದ ಮುಸ್ಲಿಂ ಸಮುದಾಯದವರು ಇಬ್ಭಾಗವಾಗದೆ ಒಂದೇ ಅಭ್ಯರ್ಥಿಗೆ ಮತ ನೀಡಬೇಕು’ ಎಂದರು.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫರುಲ್ಲಾ ಖಾನ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿದರು. ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ನಗರ ಘಟಕದ ಅಧ್ಯಕ್ಷ ಸುಶೀಲ ಆವಸ್ಥಿ, ಆಕಾಶ ಖಂಡಾಳೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.