ADVERTISEMENT

ಪ್ರಿಯಾಂಕ್ ಖರ್ಗೆಗೆ ನನ್ನ ಭಯವಿದೆ: ಚಕ್ರವರ್ತಿ ಸೂಲಿಬೆಲೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 11:28 IST
Last Updated 29 ಫೆಬ್ರುವರಿ 2024, 11:28 IST
   

ಹುಮನಾಬಾದ್ (ಬೀದರ್ ಜಿಲ್ಲೆ): ನನ್ನ ಭಯದಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಗಳ ಮೇಲೆ ಒತ್ತಡ ಹಾಕಿ ಕಲಬುರ್ಗಿ ಜಿಲ್ಲೆಗೆ ಬರದಂತೆ ನಿಷೇಧಿಸಿದ್ದಾರೆ ಎಂದು ಯುವ ಬಿಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.

ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದಲ್ಲಿ ಪತ್ರಕರ್ತರರೊಂದಿಗೆ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಸಾಧನೆ ಕುರಿತು ರಾಜ್ಯದಲ್ಲಿ ಸುಮಾರು 50 ಕಡೆಯಲ್ಲಿ ಕಾರ್ಯಕ್ರಮಗಳು ನಡೆಸಿದ್ದೇನೆ.‌ ಮಂಗಳವಾರ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಈ ಕಾರ್ಯಕ್ರಮ ಮುಗಿಸಿಕೊಂಡು ಚಿತ್ತಾಪುರಕ್ಕೆ ಹೋಗಾವಾಗ ಪೊಲೀಸರು ನನ್ನನ್ನು ತಡೆದಿದ್ದಾರೆ ಎಂದರು. ನಾನು ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರಕ್ಕೆ ಹೋಗಿ ಅವರ ಬಗ್ಗೆ ಮಾತನಾಡುತ್ತೇನೆ ಎಂಬ ಭಯದಿಂದ ಕಲಬುರ್ಗಿ ಜಿಲ್ಲೆಗೆ ನಿರ್ಬಂಧ ಹಾಕಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ನಮ್ಮ ಈ ಕಾರ್ಯಕ್ರಮ ಯಾವುದೇ ಕಾರಣಕ್ಕೂ ಚಿತ್ತಾಪುರದಲ್ಲಿ ನಡೆಯಬಾರದು ಎಂಬ ಉದ್ದೇಶದಿಂದ ರಾತ್ರಿ 11 ಗಂಟೆಗೆ ತಹಶೀಲ್ದಾರ್ ಅವರಿಂದ ಕಾರ್ಯಕ್ರಮ ರದ್ದು ಮಾಡಿಸಿದ್ದಾರೆ. ಅಲ್ಲದೇ ಕಲಬುರ್ಗಿ ಗಡಿಯಲ್ಲಿ ಯಾವುದೇ ಆದೇಶ ಇಲ್ಲದಿದ್ದರೂ ಪೊಲೀಸರು ನನ್ನನ್ನು ತಡೆದಿದ್ದಾರೆ. ಆದೇಶ ಪತ್ರ ನೀಡಿ ಇಲ್ಲದಿದ್ದರೆ ನಾನು ಕಲಬುರ್ಗಿ ಹೋಗುತ್ತೇನೆ ಎಂದಿದ್ದಕ್ಕೆ ರಾತ್ರಿ 1 ಗಂಟೆಗೆ ಅಸಿಸ್ಟೆಂಟ್ ಕಮಿಷನರ್ ಅವರಿಂದ ಆದೇಶ ಪತ್ರ ನೀಡಿದ್ದಾರೆ.

ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇನೆ. ನ್ಯಾಯಾಲಯದ ಆದೇಶ ಮೇರೆಗೆ ಮತ್ತೆ ಚಿತ್ತಾಪುರದಲ್ಲಿ ದೊಡ್ಡ ಮಟ್ಟದಲ್ಲೇ ಕಾರ್ಯಕ್ರಮ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.