ADVERTISEMENT

ಯಳಂದೂರು:ಪಾರಂಪರಿಕ ಜ್ಞಾನ ಹಂಚಿಕೊಳ್ಳಲು ಆಸ್ಟ್ರೇಲಿಯಾ ಕಾಡಿಗೆ ಗಿರಿವಾಸಿಗಳ ನಡಿಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 20:26 IST
Last Updated 28 ಫೆಬ್ರುವರಿ 2026, 20:26 IST
   

ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ‌ಬಿಳಿಗಿರಿರಂಗನ ಬೆಟ್ಟದ ಐವರು ಸೋಲಿಗರು ತಮ್ಮ ಸಮುದಾಯದ ಪಾರಂಪರಿಕ ಜ್ಞಾನವನ್ನು ಹಂಚಿಕೊಳ್ಳಲು ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.  

ಸಾಂಸೃತಿಕ ಜ್ಞಾನ ವಿನಿಮಯ ಕಾರ್ಯಕ್ರಮದ ಅಡಿ ಈ ಪ್ರವಾಸಕ್ಕೆ ಸಿ.ಮಾದೇಗೌಡ, ಕಾರನಕೇತೇಗೌಡ, ಮಾದಮ್ಮ, ಬಸವರಾಜು ಮತ್ತು ಕುಂಬೇಗೌಡ ಆಯ್ಕೆಯಾಗಿದ್ದಾರೆ. ಈ ತಂಡಕ್ಕೆ ಏಟ್ರೀ ಸಂಸ್ಥೆಯ ಪ್ರಾಧ್ಯಾಪಕ ಸಿದ್ದಪ್ಪಶೆಟ್ಟಿ ನೇತೃತ್ವ ವಹಿಸಿದ್ದಾರೆ.

ಮಾರ್ಚ್‌ 1 ರಿಂದ 11ರವರೆಗೂ ಅಲ್ಲಿನ ಆದಿವಾಸಿಗಳ ಜೀವನಶೈಲಿ, ಕಾಡಿನ ವಾಸ, ವನ ವೈವಿಧ್ಯತೆ, ವನ್ಯ ಜೀವಿಗಳೊಡನೆ ಅಲ್ಲಿನ ಮೂಲನಿವಾಸಿಗಳ ಸಹ ಜೀವನ ಹಾಗೂ ಅಲ್ಲಿನ ಬುಡಕಟ್ಟು ಸಮುದಾಯಗಳಲ್ಲಿ ಕಂಡುಬರುವ ಸಾಂಸ್ಕೃತಿಕ ವೈವಿಧ್ಯ ಮತ್ತು ಜನಪದ ಹಿನ್ನೆಲೆಯನ್ನು ತಂಡ ಅಧ್ಯಯನ ನಡೆಸಲಿದೆ.

ADVERTISEMENT

ಡಾ.ಸಿದ್ದಪ್ಪಶೆಟ್ಟಿ

ಏಟ್ರೀ ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ ರೋಹಿಣಿ ನೀಲಕಣಿ ಪರಿಸರ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿರುವ ಡಾ.ಸಿದ್ದಪ್ಪಶೆಟ್ಟಿ ಇತರೆ ದೇಶಗಳ ಕಾಡು, ಪರಿಸರ, ಅಳಿವಿನಂಚಿನ ಸಸ್ಯಗಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಸಸ್ಯಪ್ರಬೇಧಗಳ ಸಂರಕ್ಷಣೆ ಕುರಿತು ಬೋಧನೆ ಮತ್ತು ತರಬೇತಿ ನೀಡುತ್ತಿರುವ ಸಿದ್ದಪ್ಪಶೆಟ್ಟಿ ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ 50 ದೇಶಗಳಲ್ಲಿ ಗಿರಿಜನರ ಸಾಂಪ್ರದಾಯಿಕ ಜ್ಞಾನ, ಸಂಸ್ಕೃತಿ ಪರಿಚಯಿಸಿದ್ದಾರೆ. ಸೋಲಿಗರಿಗೆ ವೃತ್ತಿ, ಮಾರ್ಗದರ್ಶನ, ಅರಣ್ಯ ಹಕ್ಕು ಕಾಯ್ದೆ, ಕಾಡು ಕೃಷಿ, ಸೋಲಿಗರ ಆರ್ಥಿಕತೆ ವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಡವಿ ಸಂಸ್ಥೆಯ ಸ್ಥಾಪನೆಯ ಜೊತೆಗೆ ಲಂಟಾನದಂತಹ ಕಾಡು ಕಳೆಗಳ ಮೌಲ್ಯವರ್ಧನೆಗೆ ಹಾಗೂ ಸೋಲಿಗರ ಆರ್ಥಿಕತೆ ವೃದ್ಧಿಗೆ ಎಂ.ಎಂ.ಹಿಲ್ಸ್ ಮತ್ತು ಬಿಳಿಗಿರಿ ಕಾಡಿನಲ್ಲಿ ಪರಿಸರ ಉಳಿಸಲು ಯೋಜನೆ ರೂಪಿಸಿದ್ದಾರೆ. 500 ಸಂಶೋಧನಾ ಉಪನ್ಯಾಸ ಮತ್ತು ಹಾಡಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುವಲ್ಲಿ ನೆರವಾಗಿದ್ದು ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸ ಹೊರಟಿರುವ ಸೋಲಿಗ ತಂಡದ ನೇತೃತ್ವ ವಹಿಸಿದ್ದಾರೆ.

ಜಿಲ್ಲೆಯ ಬುಡಕಟ್ಟು ಸಂಘದ ಕಾರ್ಯದರ್ಶಿ ಮಾದೇಗೌಡ ಗಿರಿವಾಸಿಗಳ ಜನ–ಜೀವನದ ಚರಿತ್ರೆ ಹಾಗೂ ಕಾಡಿನ ಜನರ ಬದುಕು–ಬವಣೆ, ಪಲ್ಲಟಗಳನ್ನು ದಾಖಲಿಸಿದ್ದಾರೆ. ಸಮುದಾಯದ ಮೊದಲ ತಲೆಮಾರಿನ ಪದವೀಧರರಾಗಿ 2ನೇ ಬಾರಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅಮೆರಿಕದ ಅರಣ್ಯ ಉತ್ಪನ್ನಗಳ ಮಹತ್ವವನ್ನು ಅಧ್ಯಯನ ಮಾಡಿದ್ದಾರೆ. ಈಗಿನ ಪ್ರವಾಸದಲ್ಲಿ ಅವರು ಅಭಯಾರಣ್ಯ ಮತ್ತು ರಕ್ಷಿತಾರಣ್ಯಗಳ ಕುರಿತು ಮಾತನಾಡಲಿದ್ದಾರೆ.

ಮಾದಮ್ಮ,:

ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಕಾಡಿನ ಜನರ ಆರ್ಥಿಕ ಸ್ವಾವಲಂನೆ ಮತ್ತು ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾದಮ್ಮ ‘ಅಡವಿ’ ಎಂಬ ಕಾಡುತ್ಪನ್ನಗಳ ಸಂಸ್ಥೆಯ ಅಧ್ಯಕ್ಷೆ. ಸ್ಥಳೀಯವಾಗಿ ಬುಡಕಟ್ಟು ಸಮುದಾಯಗಳು ತಯಾರಿಸುವ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಸಂಸ್ಥೆ ನೂರಾರು ಜನರಿಗೆ ಉದ್ಯೋಗ ಮತ್ತು ತರಬೇತಿ ನೀಡುತ್ತಿದೆ. ಸ್ತ್ರೀ ಸ್ವಾವಲಂಬನೆ, ಸೀಗೆ, ಗೆಣಸು, ಪಾಚಿ, ಜೇನು, ನಲ್ಲಿ ಮೊದಲಾದ ಫಲ ಪುಷ್ಪಗಳ ಮೌಲ್ಯವರ್ಧನೆಗೆ ಅವರು ನೆರವಾಗಿದ್ದಾರೆ.

ಬಸವರಾಜು:

ಸೋಲಿಗ ಸಮಾಜದ ಹಾಡು, ಹಸೆ, ಕುಣಿತ ಹಾಗೂ ಜನಪದ ಕತೆಗಳನ್ನು ಬಾಯ್ದೆರೆಯಲ್ಲಿ ಕಟ್ಟಿಕೊಡುವ ಬಸವರಾಜು ನಾಡಿನ ಹಲವೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಡವಿಯ ಗುಡ್ಡ ಕಣಿವೆ, ಹೊಳೆ, ಹಳ್ಳಗಳ ಅಮೂರ್ತ ಸ್ಥಿತಿಯನ್ನು ಕಗ್ಗ ಮತ್ತು ಗೋರುಕಾನ ಮೂಲಕ ಜನಮನಕ್ಕೆ ಮುಟ್ಟಿಸುತ್ತಿದ್ದಾರೆ.

ಕಾರನ ಕ್ಯಾತೇಗೌಡ:

ಕಾನನದ ಬೇರು, ನಾರುಗಳ ಮಹತ್ವ, ಬೆಳೆ ವೈವಿಧ್ಯತೆಯ ಬಗ್ಗೆ ನೂರಾರು ಕಥೆ ಏಳುವ ಕ್ಯಾತೇಗೌಡ, ಸೋಲಿಗರ ಮಳೆ, ಬೆಳೆ, ಸಂಸ್ಕೃತಿ, ಅಲೆಮಾರಿ ಜೀವನದ ಆಯಾಮಗಳನ್ನು ನಿಸರ್ಗದ ಮೂಲದಿಂದ ಕಟ್ಟಿಕೊಡಬಲ್ಲರು. ತಾಯ್ನುಡಿಯ ಮಹತ್ವ ಹಾಗೂ ಹೊಸ ತಲೆಮಾರಿನ ತವಕ ತಲ್ಲಣಗಳನ್ನು ಸೋಲಿಗ ನುಡಿಯ ಮೂಲಕ ಅಭಿವ್ಯಕ್ತಿಸುವ ಸಾಮರ್ಥ್ಯವಿದೆ.

ಕುಂಬೇಗೌಡ:

ಹೆಚ್ಚು ಕಲಿಯದ, ಆದರೆ ಪ್ರಾಣಿ–ಪರಿಸರದ ಜೀವ ನೆಲೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕುಂಬೇಗೌಡ, ಸಮುದಾಯದ ವಿಚಾರಗಳು, ಸಹವರ್ತನೆಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ಕಾಡಿನ ಸಂಸ್ಕೃತಿ ಮತ್ತು ಚರಿತ್ರೆಯನ್ನು ಅನ್ಯ ದೇಶದ ಕಾಡು ವಾಸಿಗಳಿಗೂ ದಾಟಿಸುವ ಕಲೆಗಾರಿಕೆ ಸಿದ್ಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.