ಯಳಂದೂರು: ಈ ಬಾರಿ ಮಾವು ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ನೆರೆ ರಾಜ್ಯಗಳ ಮಾವು ಋತು ಮಾರುಕಟ್ಟೆಯಲ್ಲಿ ಪಾಳಿಯ ಮಾರಾಟ ಮುಗಿಸಿದ್ದರೆ, ಗ್ರಾಮೀಣ ಭಾಗಗಳಲ್ಲಿ ಬೆಳೆದ ಮಾವು ಇನ್ನೂ ಕೊನೆಯ ಹಂತದ ಕೊಯ್ಲಿಗೆ ಕಾದಿದೆ. ಬೆಲೆ ಕುಸಿತದಿಂದ ಕಂಗೆಟ್ಟಿರುವ ಮಾವು ಬೆಳೆಗಾರರು ಕಟಾವು ಮಾಡಿ ಮಾರಾಟ ಮಾಡಬೇಕೆ, ಬೇಡವೇ ಎಂಬ ಅತಂತ್ರ ಸ್ಥಿತಿ ತಲುಪಿದ್ದಾರೆ.
ತಾಲ್ಲೂಕಿನಲ್ಲಿ ಪ್ರಗತಿಪರ ಕೃಷಿಕರು ಮಾವಿನ ಹೊಸ ತಳಿಗಳನ್ನು ತೋಟದಲ್ಲಿ ಒಗ್ಗಿಸಿಕೊಂಡು ಬೆಳೆಯುವ ಸಾಹಸಕ್ಕೆ ಕೈಹಾಕಿದ್ದು ಯಶಸ್ಸು ಕಂಡಿದ್ದಾರೆ. ಆದರೆ, ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಕೈಸೇರದ ಸ್ಥಿತಿ ಇದೆ. ಸ್ಥಳೀಯ ಮಾವು ವೃಕ್ಷಗಳು ಇಳುವರಿ ಕಳೆದುಕೊಂಡಿದ್ದರೆ, ಆಲ್ಫಾನ್ಸೊ, ಕೇಸರ್, ಬಾದಾಮಿ, ದಶೇಹರಿ ಹಾಗೂ ಮಲ್ಲಿಕಾ ತಳಿಗಳನ್ನು ಬೆಳೆಸಿದವರಿಗೂ ಸೂಕ್ತ ಬೆಲೆ ಸಿಗುತ್ತಿಲ್ಲ.
ವಾರ್ಷಿಕ ಲಕ್ಷಾಂತರ ರೂಪಾಯಿ ವಹಿವಾಟು ತಂದುಕೊಡುವ ತಳಿಗಳ ಹಣ್ಣುಗಳ ಕಟಾವು ಈ ಬಾರಿ ತಡವಾಗಿದೆ. ಧಾರಣೆ ಕುಸಿದು, ನಿರೀಕ್ಷಿಸಿದಷ್ಟು ದರ ಸಿಗದೆ ರೈತರು ಕಂಗೆಟ್ಟಿದ್ದಾರೆ.
ಕೈಕೊಟ್ಟ ಬೆಲೆ-ಬೆಳೆ: ಏಪ್ರಿಲ್ ಆರಂಭದಲ್ಲಿ ಆಂಧ್ರ ಮೂಲದ ಮಾವು ಮಾರುಕಟ್ಟೆಗೆ ಬಂದಿತ್ತು. ಜೂನ್ ಅಂತ್ಯಕ್ಕೆ ಬಹುತೇಕ ಬಗೆಯ ಮಾವು ಹಣ್ಣುಗಳ ವಹಿವಾಟು ಮುಕ್ತಾಯವಾಯಿತು. ಜೂನ್ ಮೊದಲವಾರದಲ್ಲಿ ರಾಜ್ಯದ ಮಾವು ಕಟಾವಿಗೆ ಬಂದು ಜುಲೈ ಮಧ್ಯಂತರದವರೆಗೂ ಕೊಯ್ಲು ಮುಂದುವರಿದಿವೆ. ಈ ನಡುವೆ ಮಳೆ, ರೋಗ-ರುಜಿನವೂ ಮಾವಿನ ಬೇಡಿಕೆಯನ್ನು ತಗ್ಗಿಸಿದ್ದು ಬೆಲೆ ಮತ್ತು ಬೇಡಿಕೆ ಕಳೆದುಕೊಂಡಿದೆ. ಬೆಳೆ ಉಳಿಸಿಕೊಂಡವರು ಈಗ ಚಡಪಡಿಸುವಂತಾಗಿದೆ ಎಂದು ಕೆಸ್ತೂರು ಮಾವು ಬೆಳೆಗಾರ ಬಸವರಾಜಪ್ಪ ಹೇಳಿದರು.
ಬೆಂಬಲ ಬೆಲೆ ಅಗತ್ಯ: ಕಳೆದ ಬಾರಿ ಸಾವಯವ ವಿಧಾನದಲ್ಲಿ ಬೆಳೆದ ಮಾವನ್ನು ₹ 200 ರಿಂದ 300ರವರೆಗೂ ಮಾರಾಟ ಮಾಡಲಾಗಿತ್ತು. ಈ ಸಲ ಆರಂಭದಲ್ಲಿ ಕೆ.ಜಿಗೆ ₹ 150 ರಿಂದ 200ರವರೆಗೆ ದರ ಸಿಕ್ಕರೂ ನಂತರ ಕುಸಿತ ಕಂಡು ಉತ್ತಮ ತಳಿಯ ಮಾವಿನ ಧಾರಣೆ ಕೆ.ಜಿಗೆ 50ಕ್ಕೆ ಇಳಿಕೆಯಾಗಿದೆ. ಇದರಿಂದ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ ಎನ್ನುತ್ತಾರೆ ಬೆಳೆಗಾರರು.
‘ಎಲ್ಲರಿಗೂ ಪರಿಹಾರ ನೀಡಿ’
ಬೆಲೆ ಕುಸಿತದಿಂದ ನಷ್ಟಕ್ಕೆ ಸಿಲುಕಿರುವ ಮಾವು ರೈತರಿಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕು. ಗುಣಮಟ್ಟದ ಮಾವು ಉತ್ಪಾದಿಸುವ ಬೆಳೆಗಾರರಿಗೆ ಪರಿಹಾರ ನೀಡಬೇಕು. ಕೆಲವು ಜಿಲ್ಲೆಗೆ ಮಾತ್ರ ಸರ್ಕಾರ ನೀಡುವ ಬೆಂಬಲ ಬೆಲೆಯನ್ನು ಸಾಮಾನ್ಯ ರೈತರಿಗೂ ವಿಸ್ತರಿಸಬೇಕು ಎನ್ನುತ್ತಾರೆ ಮಾವು ಬೆಳೆಗಾರ ಲೋಕೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.