
ಯಳಂದೂರು: ಸ್ತ್ರೀಯರಿಗೆ ಸಂಕಷ್ಟದ ಸಮಯದಲ್ಲಿ ಸಹಾಯ ಹಾಗೂ ಆತ್ಮವಿಶ್ವಾಸ ನೀಡುವ ದೆಸೆಯಲ್ಲಿ ‘ಅಕ್ಕಪಡೆ’ ನೆರವು ಕಲ್ಪಿಸಲಿದೆ ಎಂದು ಚಾಮರಾಜನಗರ ಮಹಿಳಾ ಠಾಣೆಯ ಅಕ್ಕಪಡೆ ಮುಖ್ಯಸ್ಥೆ ದಿವ್ಯ ಹೇಳಿದರು.
ಪಟ್ಟಣದ ಬಸ್ನಿಲ್ದಾಣ ಮತ್ತು ಶಾಲೆ, ಕಾಲೇಜು ಸುತ್ತ ಪ್ರದೇಶದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಅಕ್ಕಪಡೆ ಬಗ್ಗೆ ಅವರು ಮಾಹಿತಿ ನೀಡಿದರು.
‘ಬಹಳ ಹಿಂದೆ ರಾಜ್ಯದಲ್ಲಿ ಇದ್ದ ಚನ್ನಮ್ಮ ಪಡೆ, ಓಬವ್ವ ಪಡೆ ಮಾದರಿಯಲ್ಲಿ ಅಕ್ಕ ಪಡೆ ರಚಿಸಲಾಗಿದೆ. ಆದರೆ. ಉಳಿದೆರಡು ಪಡೆಗಳ ಕಾರ್ಯವೈಖರಿ ಬೇರೆ ಇದ್ದು, ಮಹಿಳೆ ಮತ್ತು ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ಅಕ್ಕಪಡೆಯನ್ನು ವಿಶೇಷವಾಗಿ ರಚಿಸಿದ್ದು, ದೌರ್ಜನ್ಯಕ್ಕೆ ಒಳಗಾದವರ ಹೆಸರು ಗೋಪ್ಯವಾಗಿ ಇಟ್ಟು ಕಾರ್ಯಾಚರಣೆ ನಡೆಸುತ್ತದೆ’ ಎಂದರು.
‘ಅಕ್ಕಪಡೆ ಯಶಸ್ಸು ಸಮಾಜದ ಬೆಂಬಲ ಮತ್ತು ಪ್ರೋತ್ಸಾಹ ಬಯಸುತ್ತದೆ. ವನಿತೆಯರ ವಸತಿ ನಿಲಯ, ಬಸ್ ನಿಲ್ದಾಣ, ಜಾತ್ರೆ ಮತ್ತು ಶಾಲೆ, ಕಾಲೇಜುಗಳ ಸುತ್ತ ಪ್ರದೇಶಗಳಿಗೂ ಅಕ್ಕಪಡೆ ಭೇಟಿ ಕೊಡುತ್ತದೆ. ಸ್ತ್ರೀಯರು ಮತ್ತು ಮಕ್ಕಳು ತಮ್ಮ ಮೇಲೆ ಆಗಿರುವ ತೊಂದರೆ, ಚಿತಾವಣೆ, ಕಿಚಾಯಿಸುವವರ ವಿರುದ್ಧ ಮಾಹಿತಿ ನೀಡಬಹುದು. ಇವರಿಗೆ ಅನುಕೂಲವಾಗುವಂತೆ 24x7 ಮಾದರಿಯಲ್ಲಿ ಸಹಾಯವಾಣಿ ತೆರೆದಿದ್ದು, ರಕ್ಷಣೆ ಬಯಸಲು ಇಚ್ಚಿಸುವವರು 181, 1098 ಇಲ್ಲವೆ 112ಕ್ಕೆ ಕರೆ ಮಾಡಿ ತಿಳಿಸಬಹುದು. ಮನೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದರೂ ಅಕ್ಕಪಡೆ ಸಂಪರ್ಕಿಸಬಹುದು’ ಎಂದು ಹೇಳಿದರು.
ಪಟ್ಟಣದ ಶಾಲೆ, ಕಾಲೇಜು ಹಾಗೂ ಬಸ್ ನಿಲ್ದಾಣದ ಸುತ್ತಿನ ಗ್ರಾಮೀಣ ಮಹಿಳೆಯರಿಗೆ ತುರ್ತು ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ತಿಳಿಸಿಕೊಟ್ಟರು. ನಿಮ್ಮ ಜತೆಗೆ ನಾವು ಇದ್ದೇವೆ, ಯಾರು ಭಯಪಡುವ ಅಗತ್ಯ ಇಲ್ಲ. ಪೊಲೀಸ್ ಠಾಣೆಗೆ ನಿಮಗೆ ಬರಲು ಆಗದಿದ್ದರೆ, ನೀವಿದ್ದಲ್ಲಿಗೆ ಬರುತ್ತೇವೆ ಎಂದು ಅಕ್ಕಪಡೆ ತಂಡದ ಸದಸ್ಯರು ಜಾಗೃತಿ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.