
ಚಿಕ್ಕಬಳ್ಳಾಪುರ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿ ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಅಲೀಪುರ ಪಟ್ಟಣ ರಾಜ್ಯದ ಗಮನ ಸೆಳೆದಿದೆ.
ಈ ಪಟ್ಟಣಕ್ಕೂ ಮತ್ತು ಇರಾನ್ಗೂ ಹಲವು ದಶಕಗಳ ಸಂಬಂಧವಿದೆ. ಖಮೇನಿ ಅವರ ಹತ್ಯೆಯನ್ನು ‘ನಮ್ಮ ಧರ್ಮಗುರುವಿನ ಹತ್ಯೆಯಲ್ಲ; ಬಲಿದಾನ’ ಎಂದು ಇಲ್ಲಿನ ಜನರು ಬಣ್ಣಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಎನಿಸಿರುವ ಅಲೀಪುರದಲ್ಲಿ 25 ಸಾವಿರ ಶಿಯಾ ಮುಸ್ಲಿಮರು ಇದ್ದಾರೆ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಶಿಯಾ ಮುಸ್ಲಿಮರು ನೆಲೆಸಿರುವ ಪಟ್ಟಣವಿದು.
ಅಯಾತೊಲ್ಲಾ ಅಲಿ ಖಮೇನಿ ಗುರು ಅಯಾತೊಲ್ಲಾ ಇಮಾಮ್ ಖಮೇನಿ ಅವರ ಹೆಸರಿನಲ್ಲಿ ಗ್ರಾಮದಲ್ಲಿ ಆಸ್ಪತ್ರೆ ಸಹ ಇದೆ.
ಈ ಆಸ್ಪತ್ರೆಯ ಕಟ್ಟಡದ ಮೇಲೆ ಅಯಾತೊಲ್ಲಾ ಇಮಾಮ್ ಖಮೇನಿ ಅವರ ದೊಡ್ಡ ಚಿತ್ರವಿದೆ.
ಪಟ್ಟಣ ಪಂಚಾಯಿತಿಯಾಗಿರುವ ಅಲೀಪುರದಲ್ಲಿ ಇಂದಿಗೂ ಒಂದು ಮದ್ಯದ ಅಂಗಡಿ, ಚಿತ್ರಮಂದಿರ, ಪೊಲೀಸ್ ಠಾಣೆ ಇಲ್ಲ. ಅಲೀಪುರವು ವೇಗವಾಗಿ ಬೆಳೆಯುತ್ತಿದ್ದರೂ ಮದ್ಯದ ಅಂಗಡಿಗಳ ಆರಂಭಕ್ಕೆ ಅವಕಾಶ ನೀಡಿಲ್ಲ.
ಪೊಲೀಸ್ ಠಾಣೆಯೂ ಇಲ್ಲ: ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆ ವ್ಯಾಪಾರ, ವಹಿವಾಟು, ಶಿಕ್ಷಣದ ಕಾರಣಕ್ಕೆ ಸಂಪರ್ಕ ಹೊಂದಿದ್ದಾರೆ. ಗ್ರಾಮದ ಕೆಲವರು ಹರಳುಗಳ ವ್ಯಾಪಾರ ಸಹ ನಡೆಸುವರು. ದೊಡ್ಡ ವಹಿವಾಟು ನಡೆದರೂ ಪೊಲೀಸ್ ಠಾಣೆ ಇಲ್ಲ. ಪಕ್ಕದ ಮಂಚೇನಹಳ್ಳಿ ಠಾಣೆ ವ್ಯಾಪ್ತಿಗೆ ಅಲೀಪುರ ಒಳಪಡುತ್ತದೆ.
ಏನೇ ಸಮಸ್ಯೆಗಳು ಬಂದರೂ ಅಂಜುಮನ್ ಜಾಫರಿಯಾ ಸಂಸ್ಥೆಯ ನೇತೃತ್ವದಲ್ಲಿ ಪರಿಹರಿಸಲಾಗುತ್ತದೆ. ಅಲೀಪುರದಲ್ಲಿ ಅಂಜುಮನ್ ಎ ಜಾಫರಿಯಾ ಸಮಿತಿಯ ಸಾರಥ್ಯದಲ್ಲಿ ಗ್ರಾಮಕ್ಕೆ ಪ್ರತ್ಯೇಕವಾದ ‘ಅಲಿ ಟಿವಿ’ ಎನ್ನುವ ಕೇಬಲ್ ಚಾನಲ್ ಸಹ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.