ADVERTISEMENT

ಛಾಯಾಗ್ರಾಹಕರ ಉದ್ಯಮಕ್ಕೆ ಗ್ರಹಣ: ಸಹಾಯಧನಕ್ಕೆ ಮನವಿ

ದುಡಿಮೆ ಮೇಲೆ ಕೊರೊನಾ ಕರಿನೆರಳು

ಡಿ.ಜಿ.ಮಲ್ಲಿಕಾರ್ಜುನ
Published 31 ಮೇ 2021, 2:47 IST
Last Updated 31 ಮೇ 2021, 2:47 IST
ಶಿಡ್ಲಘಟ್ಟದ ಹೊರವಲಯದಲ್ಲಿ ಮೀನು ಮಾರುತ್ತಿರುವ ಛಾಯಾಗ್ರಾಹಕ ಛಲಪತಿ
ಶಿಡ್ಲಘಟ್ಟದ ಹೊರವಲಯದಲ್ಲಿ ಮೀನು ಮಾರುತ್ತಿರುವ ಛಾಯಾಗ್ರಾಹಕ ಛಲಪತಿ   

ಶಿಡ್ಲಘಟ್ಟ: ‘ಸ್ಮೈಲ್ ಪ್ಲೀಸ್’ ಎಂದು ಹೇಳುತ್ತಾ ಸುಂದರ ನೋಟಗಳನ್ನು ಸೆರೆಹಿಡಿದು ಎಲ್ಲರ ಮುಖದಲ್ಲೂ ನಗು ಅರಳಿಸುತ್ತಿದ್ದ ಛಾಯಾಗ್ರಾಹಕರ ಮುಖದಲ್ಲಿನ ನಗು ಕಳೆದ ವರ್ಷದ ಕೊರೊನಾ ಮೊದಲ ಅಲೆ ಕಿತ್ತುಕೊಂಡಿತ್ತು. ಇದೀಗಎರಡನೇ ಅಲೆ ಕೂಡ ಅವರ ಮೊಗದಲ್ಲಿಕಣ್ಣೀರು ಹರಿಸುತ್ತಿದೆ.

ಲಾಕ್‌ಡೌನ್ ಎಂಬ ಬರಸಿಡಿಲು ಬಡಿದು ಛಾಯಾಗ್ರಹಣದ ಉದ್ಯಮವೇ ತತ್ತರಿಸಿಹೋಯಿತು. ಪ್ರತಿ ವರ್ಷ ಫೆಬ್ರುವರಿಯಿಂದ ಮೇ ವರೆಗಿನ ನಾಲ್ಕು ತಿಂಗಳು ಉತ್ತಮ ಸೀಸನ್. ಈಗ ಕೊರೊನಾ ಸೋಂಕಿನ ಭೀತಿಯಿಂದ ಶುಭಕಾರ್ಯಗಳು ರದ್ದಾದವು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 90 ಸ್ಟುಡಿಯೋಗಳಿವೆ. ಸುಮಾರು 150 ಮಂದಿ ಮನೆಗಳಿಂದಲೇಛಾಯಾಗ್ರಹಣ ವ್ಯವಹಾರ ನಡೆಸುತ್ತಾರೆ. ಒಟ್ಟಾರೆ ಸುಮಾರು ಇನ್ನೂರೈವತ್ತು ಕುಟುಂಬಗಳು ಸಂಕಷ್ಟದಲ್ಲಿವೆ.

ADVERTISEMENT

‘ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ತಾಲ್ಲೂಕಿನ ಛಾಯಾಗ್ರಾಹಕರು ತಮ್ಮ ಕಷ್ಟವನ್ನು ವಿವರಿಸಿ ಸರ್ಕಾರದಿಂದ ನೆರವು ಕೊಡಿಸುವಂತೆ ಶಾಸಕ ವಿ.ಮುನಿಯಪ್ಪ ಅವರಿಗೆ ಹಾಗೂ ಆಗಿದ್ದತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಏನು ಪ್ರಯೋಜನವಾಗಲಿಲ್ಲ’ ಎನ್ನುತ್ತಾರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ
ಮೇಘನಾ ಶ್ರೀನಿವಾಸ್.

‘ಬಹುತೇಕರು ಛಾಯಾಗ್ರಹಣವನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿಸಿ ಕೊಂಡಿದ್ದಾರೆ. ಅವರಿಗೆಲ್ಲ ಬೇರೆ ಸಂಪಾದನೆಯಿಲ್ಲದೇ ಕುಟುಂಬ ನಡೆಸುವುದು ಕಷ್ಟವಾಗಿದೆ. ಛಾಯಾಗ್ರಾಹಕರ ನೆರವಿಗೆ ಸರ್ಕಾರ ತಿಂಗಳಿಗೆ ₹2 ಸಾವಿರ ಸಹಾಯಧನ ನೀಡಬೇಕು ಎಂದು ಅವರು ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಇದೀಗ ಎರಡನೇ ಕೊರೊನಾ ಅಲೆಯಿಂದಾಗಿ ಛಾಯಾಗ್ರಾಹಕರು ಕೆಲಸ ಇಲ್ಲದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕ್ಯಾಮೆರಾ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಮೇಘನಾ ಶ್ರೀನಿವಾಸ್.

‘ಕೊರೊನ ಭೀತಿಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಈಗ ಯಾವ ಛಾಯಾಗ್ರಾಹಕರ ಕೈಯಲ್ಲಿಯೂ ಹಣವಿಲ್ಲ. ಮನೆ ಸಂಸಾರ ನಡೆಸಲು ಕಷ್ಟಕರ ಸನ್ನಿವೇಶ ಎದುರಾಗಿದೆ. ಸರ್ಕಾರದಿಂದ ಛಾಯಾಗ್ರಾಹಕರಿಗೆ ನೆರವಿನ ಅಗತ್ಯವಿದೆ’ ಎಂದು ಕ್ಯಮೆರಾ ಮ್ಯಾನ್ ಮನೋ ಅಂಟೋನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.