
ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಬಳಿಯ ರಾಮಸಮುದ್ರ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಕೋಡಿ ಹರಿವ ಭಾಗದಲ್ಲಿ ಸ್ಥಳೀಯರ ಸಂಚಾರಕ್ಕೆ ಅಡ್ಡಿಯಾದ ಸ್ಥಳಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಅವರು ಅಧಿಕಾರಿಗಳೊಂದಿಗೆ ಬುಧವಾರ ಭೇಟಿನೀಡಿ ಸ್ಥಳೀಯರ ಸಮಸ್ಯೆ ಆಲಿಸಿದರು.
ಈ ಭಾಗದ ರಸ್ತೆಯಲ್ಲಿ ನೀರು ತುಂಬಿ ಸುತ್ತಮುತ್ತಲ ಗದ್ದೆ, ತೋಟಗಳಿಗೆ ತೆರಳಲು ಅಡ್ಡಿಯಾಗಿದೆ. ಇದರಿಂದ ಕೃಷಿ ಹೈನುಗಾರಿಕೆ ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎಂದು ಸ್ಥಳೀಯರು ಅವಲತ್ತುಕೊಂಡರು.
ಕೋಡಿ ಹರಿಯುವ ನೀರು ವ್ಯರ್ಥವಾಗಿ ಆಂಧ್ರದ ಕಡೆ ಹರಿಯುತ್ತದೆ ಎಂದು ಮಾಹಿತಿ ನೀಡಿ ಹರಿಯುವ ನೀರನ್ನು ತಡೆಯುವಂತೆ ಮನವಿ ಮಾಡಿದರು.
ಈ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಅಕ್ಟೋಬರ್ 24ರಂದು ವರದಿ ಪ್ರಕಟವಾಗಿತ್ತು. ಸ್ಥಳೀಯವಾಗಿ ಸಂಚಾರಕ್ಕೆ ಅಡ್ಡಿಯಾಗದಂತೆ ಈ ಭಾಗದಲ್ಲಿ ಹರಿಯುವ ನೀರಿನ ಕಾಲುವೆಗೆ ತಡೆಯಾಗಿ ಮೋರಿ ನಿರ್ಮಿಸಲು ಸಾಧ್ಯವೇ ಎಂದು ಪರಿಶೀಲಿಸಿ ಸೇತುವೆ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾದಲಿ ಕ್ರಾಸ್ನಿಂದ ಎಸ್.ದೇವಗಾನಹಳ್ಳಿವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ದೂಳು ಆವರಿಸಿ ರಸ್ತೆ ಅಕ್ಕಪಕ್ಕದ ಗದ್ದೆ, ತೋಟಗಳ ಬೆಳೆ ಹಾಳಾಗುತ್ತಿದೆ. ಪ್ರಯಾಣಿಕರಿಗೂ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
ರಸ್ತೆ ಕಾಮಗಾರಿ ವೇಳೆ ದೂಳಿನಿಂದ ತೊಂದರೆ ಆಗದಂತೆ ಕ್ರಮವಹಿಸಲು ಸಂಬಂಧಿಸಿದ ಕಾಮಗಾರಿ ಗುತ್ತಿಗೆದಾರರಿಗೆ ಸೂಚಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಾದಲಿ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಹಾಗೂ ಅಲ್ಲಿಗೆ ಸಮೀಪ ಸರ್ಕಾರದಿಂದ ನೀಡಿರುವ ನಿವೇಶನಗಳ ಜಾಗದಲ್ಲಿ ವಿದ್ಯುತ್ ಸಂಪರ್ಕ ಸರಿಯಾಗಿ ಇಲ್ಲದ ಕಾರಣ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಸಮಸ್ಯೆ ಹೇಳಿಕೊಂಡರು.
ತಾದೂರು ರಘು, ತ್ಯಾಗರಾಜ್, ಆವುಲರೆಡ್ಡಿ, ಗಂಗಾಧರ್, ಆಂಜಿನಪ್ಪ, ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ, ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.