ADVERTISEMENT

ಗೌರಿಬಿದನೂರು: ಲಸಿಕೆ ಪಡೆಯಲು ಉಚಿತ ಆಂಬುಲೆನ್ಸ್ ಸೇವೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 3:00 IST
Last Updated 31 ಮಾರ್ಚ್ 2021, 3:00 IST
ಕೋವಿಡ್ ಲಸಿಕೆ ಪಡೆಯಲು ರಮಾಪುರದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಿದ್ದ ಕೆ.ಎಚ್.ಪದ್ಮರಾಜ್ ಜೈನ್
ಕೋವಿಡ್ ಲಸಿಕೆ ಪಡೆಯಲು ರಮಾಪುರದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಿದ್ದ ಕೆ.ಎಚ್.ಪದ್ಮರಾಜ್ ಜೈನ್   

ಗೌರಿಬಿದನೂರು: ತಾಲ್ಲೂಕಿನ ‌ರಮಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿನ ‌ಹಳ್ಳಿಗಳಲ್ಲಿರುವ ವಯೋವೃದ್ಧರು ರಮಾಪುರದಲ್ಲಿನ ಪ್ರಾಥಮಿಕ ‌ಆರೋಗ್ಯ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ‌ ನಮ್ಮ ಚಾಲಕರ ಟ್ರೇಡ್ ‌ಯೂನಿಯನ್‌ ವತಿಯಿಂದ ವೃದ್ಧರ ಸುರಕ್ಷಿತೆಗಾಗಿ ಎರಡು ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿನ ಹಂಪಸಂದ್ರ, ಜೋಡಿಬಿಸಲಹಳ್ಳಿ, ಕುದುರೆಬ್ಯಾಲ್ಯ, ಹೊಸ ಉಪ್ಪಾರಹಳ್ಳಿ, ಕುಂದಿಹಳ್ಳಿ, ಜಾಲಹಳ್ಳಿ ಸೇರಿದಂತೆ ಇನ್ನಿತರ ‌ಗ್ರಾಮಗಳಿಂದ ವೃದ್ಧರನ್ನು ಕಡೆತರಲು ಸೂಕ್ತ ವ್ಯವಸ್ಥೆ ‌ಮಾಡಲಾಗಿತ್ತು.

ಚಾಲಕರ ಟ್ರೇಡ್ ಯೂನಿಯನ್ ರಾಜ್ಯ ಘಟಕದ ಗೌರವಾಧ್ಯಕ್ಷ ಕೆ.ಎಚ್.ಪದ್ಮರಾಜ್ ಜೈನ್ ಮಾತನಾಡಿ, ‘ಕೋವಿಡ್‌ನಿಂದ ಜನತೆಸಂಕಷ್ಟಕ್ಕೆ ಈಡಾಗಿದ್ದು ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರವು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ‌ಭಾಗದಲ್ಲಿನ ವಯೋವೃದ್ಧರಿಗಾಗಿ ಉಚಿತ ಲಸಿಕೆಯನ್ನು ‌ನೀಡುತ್ತಿರುವುದುಸಂತಸದ ವಿಚಾರವಾಗಿದೆ. ಆದರೆ ಬೇಸಿಗೆಯ ಉರಿಬಿಸಿಲಿನಲ್ಲಿ ಕಿ.ಮೀ‌ ಗಟ್ಟಲೆ ನಡೆದು ಬಂದು ಲಸಿಕೆ ಹಾಕಿಸಿಕೊಳ್ಳಲು ವೃದ್ಧರು ಚಿಂತಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಂಘದ ವತಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿದ್ದು, ಇದರ ಜತೆಗೆ ವೃದ್ಧರ ದಣಿವಾರಿಸಲು ಮಜ್ಜಿಗೆ, ಕುಡಿಯುವ ನೀರು ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಮುಖಂಡರಾದ ಎಚ್‌.ಎನ್.ಪ್ರಕಾಶರೆಡ್ಡಿ ‌ಮಾತನಾಡಿ, ‘ಬಡ ಮತ್ತು ಕೂಲಿ‌ ಕಾರ್ಮಿಕರು ಊರಿಂದ ಊರಿಗೆ ತೆರಳಿ ಕೋವಿಡ್ ‌ಲಸಿಕೆ ಪಡೆಯಲು ಚಿಂತಿಸುತ್ತಿರುವ ವೇಳೆ ನಮ್ಮ ಚಾಲಕರ ಟ್ರೇಡ್ ಯೂನಿಯನ್ ‌ವತಿಯಿಂದ ಉಚಿತವಾಗಿ ಆಂಬುಲೆನ್ಸ್ ಸೇವೆಯನ್ನು ‌ಒದಗಿಸಿರುವುದು ಶ್ಲಾಘನೀಯವಾಗಿದೆ. ಇದರಿಂದ ಲಸಿಕೆ ಪಡೆದ ನಂತರ ಸುರಕ್ಷಿತವಾಗಿಅವರು ಮನೆಗೆ ತೆರಳಿ ವಿಶ್ರಾಂತಿ ಪಡೆಯಲು ಸಹಕಾರಿಯಾಗಲಿದೆ’ ಎಂದು‌ ಹೇಳಿದರು.

ನಮ್ಮ ಚಾಲಕರ ಟ್ರೇಡ್ ಯೂನಿಯನ್ ನ ಜಿಲ್ಲಾ ಘಟಕದ ಅಧ್ಯಕ್ಷ ಛತ್ರಂಶ್ರೀಧರ್, ಮುಖಂಡರಾದ ಕೆ.ಟಿ.ಕಾಟಪ್ಪ, ಪುರುಷೋತ್ತಮ್, ನಾರಾಯಣಪ್ಪ, ಸಿದ್ದರಾಮಯ್ಯ, ಕೆ.ಟಿ.ಮಹೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.