ADVERTISEMENT

ಶಿಡ್ಲಘಟ್ಟ | ಅವ್ಯವಸ್ಥೆಗೆ ಅಧ್ಯಕ್ಷ ಅಸಮಾಧಾನ

ಆಸ್ಪತ್ರೆ, ಅಂಗನವಾಡಿ ಕೇಂದ್ರಕ್ಕೆ ಆಹಾರ ಆಯೋಗದ ಅಧ್ಯಕ್ಷರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:07 IST
Last Updated 18 ಸೆಪ್ಟೆಂಬರ್ 2025, 5:07 IST
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ನೇತೃತ್ವದ ತಂಡ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ರೋಗಿಗಳನ್ನು ವಿಚಾರಿಸಿದರು
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ನೇತೃತ್ವದ ತಂಡ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ರೋಗಿಗಳನ್ನು ವಿಚಾರಿಸಿದರು   

ಶಿಡ್ಲಘಟ್ಟ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹಾಗೂ ಸದಸ್ಯರ ತಂಡ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೋಷಕರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಭೇಟಿ ನೀಡಿದ ವೇಳೆ ಕಂಡು ಬಂದ ಅವ್ಯವಸ್ಥೆ, ಸಮಸ್ಯೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡದಿರುವುದು, ಸಣ್ಣಪುಟ್ಟ ಕಾರಣಕ್ಕೂ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡುವುದು ಕಂಡು ಬಂದಿತು.

100 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದರೂ ಕೇವಲ 42ರೋಗಿಗಳು ಮಾತ್ರ ದಾಖಲಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಆಹಾರ ಆಯೋಗದ ಅಧ್ಯಕ್ಷರು, ‘ನಿಮ್ಮಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ನೀವು ಮತ್ತು ಸಿಬ್ಬಂದಿ ರೋಗಿಗಳ ಜತೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ನಿಮ್ಮ ಮೇಲೆ ನಂಬಿಕೆ ಇಲ್ಲದ ಕಾರಣ ಈ ಆಸ್ಪತ್ರೆಗೆ ರೋಗಿಗಳೆ ಬರುತ್ತಿಲ್ಲ’ ಎಂದು ಕಿಡಿಕಾರಿದರು.

ADVERTISEMENT

ಒಂದು ತಿಂಗಳ ಅವಧಿಯಲ್ಲಿ ಕೇವಲ 17 ಹೆರಿಗೆ ಪ್ರಕರಣ ದಾಖಲಾಗಿದ್ದ ಬಗ್ಗೆ ತಿಳಿದು, ‘ತಾಲ್ಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಕೇವಲ 17 ಹೆರಿಗೆ ಪ್ರಕರಣ ಮಾತ್ರ ದಾಖಲಾಗಿವೆ ಎಂದರೆ ಏನು ಅರ್ಥ’ ಎಂದು ವೈದ್ಯಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು.

‘ಇಡೀ ರಾಜ್ಯದಲ್ಲಿ ಸುತ್ತಾಡಿದ್ದೇನೆ. ಇಷ್ಟು ಕಡಿಮೆ ರೋಗಿಗಳು ದಾಖಲಾಗಿರುವ ಆಸ್ಪತ್ರೆ ಇದು’ ಎಂದು ಅಸಮಾಧಾನ ಹೊರಹಾಕಿದರು.

‘ಸಾಮಾನ್ಯವಾಗಿ ಬಡವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎಂದರೆ ಒಂದು ಎಲ್ಲರೂ ಇಲ್ಲಿ ಆಗರ್ಭ ಶ್ರೀಮಂತರಾಗಿರಬೇಕು ಇಲ್ಲವೇ ನೀವು ಸರಿಯಾಗಿ ಔಷದೋಪಚಾರ ಮಾಡುತ್ತಿಲ್ಲ ಎಂದರ್ಥ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾಫಿ, ಟೀಗೆಂದು ಹೊರಗೆ ಹೋದರೆ ಗಂಟೆಗಟ್ಟೆಲೆ ಬರುವುದಿಲ್ಲವಂತೆ. ಜಾಸ್ತಿ ಮಂದಿ ರೋಗಿಗಳು ಬಂದರೆ ನಾವೊಬ್ಬರೇನಾ ಇಲ್ಲಿ ಕೆಲಸ ಮಾಡುವ ಡಾಕ್ಟ್ರು ಎಂದು ಕಿತ್ತಾಡಿಕೊಂಡು ರೋಗಿಗಳನ್ನು ತಪಾಸಣೆ ಮಾಡದೆ ಅಲ್ಲಿಂದ ಎದ್ದು ಹೊರಟು ಹೋಗುತ್ತೀರಂತೆ ಹೌದಾ’ ಎಂದು ಪ್ರಶ್ನಿಸಿದರು.

‘ಆಸ್ಪತ್ರೆಯಲ್ಲಿ ದಾಖಲಾಗುವ ಬಾಣಂತಿ, ಗರ್ಭಿಣಿಯರಿಗೆ ತಿಂಡಿ, ಊಟ ಕೊಡಲು ಅನುದಾನ ಇಲ್ಲ ಎಂದು ಕೈಕಟ್ಟಿ ಕೂರಬೇಡಿ. ಶಾಸಕರು, ಜನಪ್ರತಿನಿಧಿಗಳು, ಸಮಾಜ ಸೇವಕರು, ದಾನಿಗಳನ್ನು ಭೇಟಿ ಮಾಡಿ ಕೇಳಿದರೆ ಇಲ್ಲ ಎಂದು ಯಾರೂ ಹೇಳುವುದಿಲ್ಲ. ರೋಗಿಗಳಿಗೆ ತಿಂಡಿ, ಊಟ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ’ ಎಂದು ಹೇಳಿದರು.

‘ಆರೋಗ್ಯ ರಕ್ಷಾ ಅನುದಾನದಲ್ಲಿ ಆಸ್ಪತ್ರೆಯಲ್ಲಿ ಅಗತ್ಯವಿರುವ ಸಣ್ಣಪುಟ್ಟ ಪರಿಕರಗಳನ್ನು ಖರೀದಿಸದೆ ಸುಮ್ಮನಿದ್ದರೆ ಹೇಗೆ?’ ಎಂದರು.

ಒಳ ರೋಗಿಗಳ ಬಗ್ಗೆ ಇಲ್ಲಿ ಸಿಗುತ್ತಿರುವ ವೈದ್ಯಕೀಯ ಚಿಕಿತ್ಸೆ, ಸಿಬ್ಬಂದಿ ಸ್ಪಂದಿಸುವ ವಿಧಾನ, ಹಣ ಪಡೆಯುತ್ತಾರಾ, ಸರಿಯಾಗಿ ತಿಂಡಿ ಊಟ ಕೊಡುತ್ತಾರಾ, ಬಿಸಿ ನೀರು ಸಿಗುತ್ತದೆಯೇ ಎಂಬಿತ್ಯಾದಿ ವಿಷಯಗಳನ್ನು ಕೇಳಿ ತಿಳಿದುಕೊಂಡರು.

ಆಶ್ರಯ ಬಡಾವಣೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ಇನ್ನಿತರೆ ಸವಲತ್ತುಗಳ ಮಾಹಿತಿ ಪಡೆದುಕೊಂಡರು. ದಾಖಲೆ ಪರಿಶೀಲಿಸಿದರು. ಮಕ್ಕಳ ಪೋಷಕರಿಗೆ ತಾವೇ ಸ್ವತಃ ಕರೆ ಮಾಡಿ ಕೋಳಿ ಮೊಟ್ಟೆ ಇನ್ನಿತರೆ ಆಹಾರ ಪದಾರ್ಥಗಳನ್ನು ಕೊಟ್ಟ ಬಗ್ಗೆ ವಿಚಾರಿಸಿದರು. ಈ ವೇಳೆ ಕೆಲವರಿಗೆ ಕಡಿಮೆ ಸಂಖ್ಯೆಯ ಮೊಟ್ಟೆ ವಿತರಿಸಿರುವುದು ಬೆಳಕಿಗೆ ಬಂತು.

ಆಹಾರ ಆಯೋಗದ ಸಮಿತಿ ಸದಸ್ಯ ಲಿಂಗರಾಜು ಕೋಟೆ, ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣನವರ್, ರೋಹಿಣಿ ಪ್ರಿಯ, ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ವೆಂಕಟೇಶ್‌ರೆಡ್ಡಿ, ಆಹಾರ ಇಲಾಖೆ ಪ್ರಕಾಶ್, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.