ವಿಧಾನಸೌಧ
ಬಾಗೇಪಲ್ಲಿ: ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲ್ಲೂಕುಗಳಲ್ಲಿ ನಮೂನೆ 50 ಮತ್ತು 53 ರಡಿ ರೈತರ ಸಾಗುವಳಿ ಚೀಟಿ ಬಾಕಿ ಇರುವ ಪ್ರಕರಣ ಎಷ್ಟಿವೆ, ಯಾವ ಕಾಲಮಿತಿಯೊಳಗೆ ರೈತರಿಗೆ ಅನುಕೂಲ ಮಾಡಿಕೊಡುತ್ತೀರಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೋಮವಾರ ವಿಧಾನಸಭಾ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಪ್ರಶ್ನೆ ಕೇಳಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಉತ್ತರ ನೀಡಿ, ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲ್ಲೂಕುಗಳಲ್ಲಿ ನಮೂನೆ 50 ರಲ್ಲಿ 3,214, ನಮೂನೆ 53 ರಲ್ಲಿ 73 ಹಾಗೂ ಗುಡಿಬಂಡೆ ತಾಲ್ಲೂಕಿನಲ್ಲಿ ನಮೂನೆ 50 ಹಾಗೂ 53 ರಲ್ಲಿ ತಲಾ ಒಂದೊಂದು ಪ್ರಕರಣ ಬಾಕಿ ಇವೆ ಎಂದು ತಿಳಿಸಿದ್ದಾರೆ.
ಮಂಜೂರಾತಿ 76 ಪ್ರಕರಣದಲ್ಲಿ ಮಂಜೂರಿ ಕಡತ ಲಭ್ಯ ಇಲ್ಲದೇ ಇರುವುದು ಕಂಡುಬಂದಿದೆ. ಪ್ರಸ್ತುತ ಭೂ ಸುರಕ್ಷಾ ತಂತ್ರಾಂಶದಲ್ಲಿ ಸ್ಕ್ಯಾನಿಂಗ್ ಕಾರ್ಯ ನಡೆಯುತ್ತಿದೆ. ಪೂರ್ಣಗೊಂಡ ಕೂಡಲೇ ಮೂಲ ಕಡತ ಲಭ್ಯವಾಗದ ಪಕ್ಷದಲ್ಲಿ ಈ ಮಂಜೂರಾತಿಯ ನೈಜತೆಗೆ ಸಂಬಂಧಪಟ್ಟಂತೆ ಕಚೇರಿಯಲ್ಲಿ ಇರುವ ಅರ್ಜಿ ಸ್ವೀಕೃತಿ ವಹಿ, ಸಭಾ ನಡಾವಳಿ ಮತ್ತು ಸಾಗುವಳಿ ಚೀಟಿ ವಿತರಣಾ ವಹಿ ಪರಿಶೀಲಿಸಿ ಖಾತೆಗೆ ಕ್ರಮವಹಿಸಲಾಗುವುದು ಎಂದು ಉತ್ತರಿಸಿದ್ದಾರೆ.
ಮಂಜೂರಾತಿಯ 713 ಜಮೀನುಗಳು ಅಧಿಸೂಚಿತ ಮೀಸಲು ಅರಣ್ಯ, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಬರುತ್ತದೆ. ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ನೀಡುವ ಹಂತದಲ್ಲಿ 210 ಪ್ರಕರಣ ಕಂಡುಬಂದಿವೆ. 14 ಪ್ರಕರಣಗಳಿಗೆ ಸಂಬಂಧಿಸಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸ್ಥಳ ತನಿಖೆ ಮಾಡಿ ನಿರಾಕ್ಷೇಪಣಾ ಪತ್ರ ಸಲ್ಲಿಸಿರುವ ಪ್ರಕರಣಕ್ಕೆ ಖಾತೆ ಮಾಡಲಾಗಿದೆ ಎಂದು ತಿಳಿಸಿದರು.
90 ಮಂಜೂರಾತಿ ಪ್ರಕರಣಗಳಲ್ಲಿ ಪೌರ ಸರಹದ್ದಿನ ಒಳಗಡೆ ನಿರ್ಬಂಧಿಸಿದ ಅಂತರದಲ್ಲಿ ಮಂಜೂರಾತಿ ನೀಡಿದ್ದು ಕಂಡುಬಂದಿದೆ. ಇವುಗಳನ್ನು ವಜಾ ಮಾಡಲು ಕ್ರಮ ವಹಿಸಲಾಗುತ್ತಿದೆ. 26 ಪ್ರಕರಣಗಳಲ್ಲಿ ಮಂಜೂರಾತಿ ಮಾಡಿದ್ದು, ಸಮಿತಿಯ ಮುಂದೆ ಮಂಡಿಸಿ, ಸ್ಥಿರೀಕರಿಸಲು ಬಾಕಿ ಇದೆ. ಮುಂದಿನ ಬಗರ್ ಹುಕಂ ಸಮಿತಿ ಮುಂದೆ ಮಂಡಿಸಿ ಇತ್ಯರ್ಥಪಡಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.