ADVERTISEMENT

Karnataka Cabinet: ಸಚಿವ ಸ್ಥಾನದ ಮೇಲೆ ಸುಬ್ಬಾರೆಡ್ಡಿ ದೃಷ್ಟಿ

ಪುನರ್ ರಚನೆಯಾದರೆ ಸ್ಥಾನ ಬೇಕೇ ಬೇಕು ಎಂದ ಬಾಗೇಪಲ್ಲಿ ಶಾಸಕ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಡಿಸೆಂಬರ್ 2024, 5:39 IST
Last Updated 7 ಡಿಸೆಂಬರ್ 2024, 5:39 IST
ಎಸ್.ಎನ್.ಸುಬ್ಬಾರೆಡ್ಡಿ
ಎಸ್.ಎನ್.ಸುಬ್ಬಾರೆಡ್ಡಿ   

ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಗುಲ್ಲು ಜೋರಾಗಿದೆ. ಸಂಪುಟ ಪುನರ್ ರಚನೆಯಾದರೆ ನಾವೂ ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ಕಾಂಗ್ರೆಸ್‌ನ ಕೆಲವು ಶಾಸಕರು ತಮ್ಮ ಮನದ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. 

ಈ ಸಾಲಿಗೆ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎಸ್‌.ಸುಬ್ಬಾರೆಡ್ಡಿ ಸಹ ಸೇರಿದ್ದಾರೆ. ‘ನನಗೆ ಸಚಿವ ಸ್ಥಾನ ಬೇಕೇ ಬೇಕು’ ಎಂದು ಪ್ರತಿಪಾದಿಸುತ್ತಿದ್ದಾರೆ. 

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದ ನಂತರ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಮತ್ತು ಬಾಗೇಪಲ್ಲಿ ಶಾಸಕ ಎಸ್‌.ಎಸ್‌.ಸುಬ್ಬಾರೆಡ್ಡಿ ಅವರ ಹೆಸರು ಸಚಿವ ಸ್ಥಾನದ ವಿಚಾರದಲ್ಲಿ ಜಿಲ್ಲೆಯಿಂದ ಪ್ರಮುಖವಾಗಿ ಕೇಳಿ ಬಂದಿದ್ದವು. ಈ ಇಬ್ಬರು ಮೂರು ಬಾರಿ ಶಾಸಕರಾಗಿದ್ದಾರೆ.  

ADVERTISEMENT

ಸುಬ್ಬಾರೆಡ್ಡಿ ಅವರು ಸಚಿವ ಸ್ಥಾನದ ವಿಚಾರವಾಗಿ ವರಿಷ್ಠರ ಭೇಟಿ ಮಾಡಲು ನವದೆಹಲಿಗೆ ತೆರಳದಿರುವುದೇ ಅವರು ಸ್ಥಾನದಿಂದ ವಂಚಿತವಾಗಲು ಕಾರಣ ಎನ್ನುವ ಮಾತುಗಳು ಸಹ ಆಗ ಕೇಳಿ ಬಂದವು. ಡಾ.ಎಂ.ಸಿ.ಸುಧಾಕರ್ ಅವರಿಗೆ ಸಚಿವ ಸ್ಥಾನದ ಭಾಗ್ಯ ಒಲಿಯಿತು.  

ಸಚಿವ ಸ್ಥಾನ ದೊರೆಯದಿದ್ದಾಗ ಸುಬ್ಬಾರೆಡ್ಡಿ ಅವರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ನಂತರ ಕರ್ನಾಟಕ ಬೀಜ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಲಾಯಿತು. ಆದರೆ ಅವರು ನಿಗಮದ ಅಧ್ಯಕ್ಷ ಸ್ಥಾನ ತಿರಸ್ಕರಿಸಿದರು. ‘ಸಚಿವ ಸ್ಥಾನ ನೀಡುವುದಾರೆ ನೀಡಿ, ಇಲ್ಲವೆ ಯಾವುದೇ ಹುದ್ದೆ ಬೇಡ’ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಸುದೀರ್ಘವಾದ ಪತ್ರ ಸಹ ಬರೆದಿದ್ದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಅವರ ಬೇಗುದಿ ತಣ್ಣಗಾಗಿತ್ತು. ‘ಮುಂದಿನ ದಿನಗಳಲ್ಲಿ ಸಚಿವ ಸ್ಥಾನದ ಅವಕಾಶ ಕೊಡುವ ಭರವಸೆಯನ್ನು ಪಕ್ಷದ ನಾಯಕರು ನೀಡಿದ್ದರು’ ಎಂದು ಶಾಸಕರ ಆಪ್ತರು ತಿಳಿಸುವರು. 

ಪಕ್ಷೇತರರಾಗಿ 2013ರಲ್ಲಿ ಶಾಸಕರಾದ ಸುಬ್ಬಾರೆಡ್ಡಿ ನಂತರ ಕಾಂಗ್ರೆಸ್ ಸೇರಿದರು. 2018 ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಎನಿಸಿದ್ದಾರೆ.

ಈ ಹಿಂದೆ ಬಿಜೆಪಿಯ ಆಪರೇಷನ್ ಕಮಲದ ವೇಳೆ ಸುಬ್ಬಾರೆಡ್ಡಿ ಅವರಿಗೂ ಸಚಿವ ಸ್ಥಾನದ ಆಮಿಷವೊಡ್ಡಲಾಗಿತ್ತು. ಆದರೆ ಅವರು ಕೈನಲ್ಲಿಯೇ ಗಟ್ಟಿಯಾಗಿ ಉಳಿದರು. ಸಚಿವ ಸ್ಥಾನದ ವಿಚಾರವು ಮುನ್ನೆಲೆಗೆ ಬಂದಾಗ, ಸುಬ್ಬಾರೆಡ್ಡಿ ಅವರು ಆಪರೇಷನ್ ಕಮಲದ ಆಮಿಷ ಬಗ್ಗೆ ಮಾತನಾಡುವರು. ನಾನು ಪಕ್ಷ ನಿಷ್ಠನಾದ ಕಾರಣದಿಂದಲೇ ಕಾಂಗ್ರೆಸ್‌ನಲ್ಲಿ ಉಳಿದೆ. ಈ ನಿಷ್ಠೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಕೋರುವರು.

ಹೀಗೆ ಕಾಂಗ್ರೆಸ್ ಶಾಸಕರಲ್ಲಿ ಸಚಿವ ಸಂಪುಟ ರಚನೆಯ ವಿಚಾರವು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯ ರಾಜಕಾರಣದಲ್ಲಿಯೂ ಸುಬ್ಬಾರೆಡ್ಡಿ ಸಚಿವರಾಗುವರೇ ಎನ್ನುವ ಚರ್ಚೆ ನಡೆದಿದೆ.

ಬಾಗೇಪಲ್ಲಿಗೆ ದೊರೆಯದ ಸ್ಥಾನ: ಚಿಕ್ಕಬಳ್ಳಾಪುರ ಜಿಲ್ಲೆಯು ಒಟ್ಟು ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಆದರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯಾರೂ ಸಹ ಸಚಿವರಾಗಿಲ್ಲ. 

ಅವಿಭಜಿತ ಕೋಲಾರ ಜಿಲ್ಲೆಗೆ ಒಳಪಟ್ಟಿದ್ದ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಚೌಡರೆಡ್ಡಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ, ಈಗ ಡಾ.ಎಂ.ಸಿ.ಸುಧಾಕರ್, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ವಿ.ಮುನಿಯಪ್ಪ ಸಚಿವರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯು ರಚನೆಯಾದ ನಂತರ ಗೌರಿಬಿದನೂರಿನ ಶಿವಶಂಕರರೆಡ್ಡಿ ಮತ್ತು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಸಚಿವರಾಗಿದ್ದಾರೆ. ಚಿಕ್ಕಬಳ್ಳಾಪುರ  ಶಾಸಕಿಯಾಗಿದ್ದ ರೇಣುಕಾ ರಾಜೇಂದ್ರನ್ ಸಹ ಸಚಿವರಾಗಿದ್ದರು. 

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕೂ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳು ಸಚಿವ ಸ್ಥಾನ ಅಲಂಕರಿಸಿದ್ದಾರೆ. ಆದರೆ ರಾಜ್ಯದ ಗಡಿಯಲ್ಲಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ಮರೀಚಿಕೆ ಎನ್ನುವಂತಾಗಿದೆ. 

‘ಸ್ಥಾನ ನೀಡುವ ವಿಶ್ವಾಸವಿದೆ’ 

ಬಾಗೇಪಲ್ಲಿ: ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದೇನೆ. ಬಿಜೆಪಿ ಅವರು ಸಚಿವ ಸ್ಥಾನ ನೀಡುತ್ತೇವೆ. ಪಕ್ಷಕ್ಕೆ ಬನ್ನಿ ಎಂದು ಕೇಳಿದ್ದರು. ಆದರೆ ಹಣ ಹಾಗೂ ಅಧಿಕಾರದ ಆಸೆಗೆ ನಾನು ಕಾಂಗ್ರೆಸ್ ಬಿಟ್ಟು ಹೋಗಿಲ್ಲ. ನನ್ನ ಕ್ಷೇತ್ರದ ಮತದಾರರ ನಿರ್ಣಯದಂತೆ ಕಾಂಗ್ರೆಸ್‌ನಲ್ಲಿ ಇದ್ದೇನೆ. ಕಾಂಗ್ರೆಸ್ ಸರ್ಕಾರದ ಪೂರ್ಣ ಬಹುಮತ ಪಡೆದ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ. ಆದರೆ ಹೈ ಕಮಾಂಡ್ ಸಚಿವ ಸ್ಥಾನ ನೀಡಿಲ್ಲ ಎಂದು ತಿಳಿಸಿದರು. ಇದೀಗ ಸಚಿವ ಸ್ಥಾನ ಬೇಕೇ ಬೇಕು ಎಂದು ಕೇಳಿದ್ದೇನೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೊ ಕಾಯುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.