ADVERTISEMENT

ಗೌರಿಬಿದನೂರು | ಆಸ್ಪತ್ರೆ ಮುಂದೆ ಶವ ಇಟ್ಟು ಪ್ರತಿಭಟನೆ

ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ: ಸಂಬಂಧಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:54 IST
Last Updated 18 ಸೆಪ್ಟೆಂಬರ್ 2025, 4:54 IST
ಗೌರಿಬಿದನೂರು ಬಾಣಂತಿ ಸಾವಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಭಾಗ್ಯಮ್ಮ ಸಂಬಂಧಿಕರು ಬುಧವಾರ ಆಸ್ಪತ್ರೆ ಮುಂದೆ ಶವಇಟ್ಟು ಪ್ರತಿಭಟನೆ ನಡೆಸಿದರು
ಗೌರಿಬಿದನೂರು ಬಾಣಂತಿ ಸಾವಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಭಾಗ್ಯಮ್ಮ ಸಂಬಂಧಿಕರು ಬುಧವಾರ ಆಸ್ಪತ್ರೆ ಮುಂದೆ ಶವಇಟ್ಟು ಪ್ರತಿಭಟನೆ ನಡೆಸಿದರು   

ಗೌರಿಬಿದನೂರು: ಹೆರಿಗೆಗೆ ಬಂದಿದ್ದ ಭಾಗ್ಯಮ್ಮ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮೃತ ಮಹಿಳೆಯ ಸಂಬಂಧಿಕರು ಬುಧವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಶವವಿಟ್ಟು ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಅಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಹೆರಿಗೆಗೆ ಎಂದು ಬಂದಿದ್ದ ಪುಲಗಾನಹಳ್ಳಿ ಗ್ರಾಮದ ಭಾಗ್ಯಮ್ಮ (30) ಚಿಕಿತ್ಸೆ ಪಡೆದು ಅಲ್ಲಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ರಕ್ತದ ಮಾದರಿಯ ಗೊಂದಲದಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಭಾಗ್ಯಮ್ಮ ಮೃತಪಟ್ಟಿದ್ದರು.

ಮನುಷ್ಯನ ರಕ್ತದ ಗುಂಪು ಏಕಾಏಕಿ ಬದಲಾಗಲು ಹೇಗೆ ಸಾಧ್ಯ. ಹುಟ್ಟಿನಿಂದ ಸಾಯುವವರೆಗೂ ಒಂದೇ ರಕ್ತದ ಗುಂಪು ಇರುತ್ತದೆ. ಆದರೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಬಡ ಮಹಿಳೆಯನ್ನು ಬಲಿ ತೆಗೆದುಕೊಂಡಿದೆ. ಬಡವರ ಪ್ರಾಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಲೆ ಇಲ್ಲದಂತಾಗಿದೆ. ಬದ್ಧತೆ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಪ್ರಭಾರ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಬಾಬು ಮಾತನಾಡಿ, ಹೆರಿಗೆ ನೋವಿನಿಂದ ಬಂದ ಭಾಗ್ಯಮ್ಮರನ್ನು ಇಲ್ಲಿನ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಗಂಡು ಮಗುವಿಗೆ ಹೆರಿಗೆ ಮಾಡಿಸಿದ್ದಾರೆ. ರಕ್ತಸ್ರಾವ ಜಾಸ್ತಿಯಾದಾಗ ರಕ್ತ ನೀಡಲು ರಕ್ತದ ಮಾದರಿ ಪರೀಕ್ಷೆ ನಡೆಸಿದಾಗ ಬಿ- ಎಂದು ಗೊತ್ತಾಗಿದೆ. ಆದರೆ ಅಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದವರು ಬಿ+ ಎಂದು ನೀಡಿದ್ದರು. ಆಗ ಬಿ- ರಕ್ತ ಲಭ್ಯವಿರದೆ ಇದ್ದುದರಿಂದ o- ರಕ್ತ ನೀಡಿದ್ದಾರೆ. ನಂತರ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಅವರು ಅಲ್ಲಿ ಮೃತಪಟ್ಟಿದ್ದಾರೆ
ಎಂದರು.

ಈಗಲೇ ಅಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರಕ್ತದ ಮಾದರಿ ತಪ್ಪಾಗಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ತಪ್ಪಾಗಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮರಣೋತ್ತರ ವರದಿ ಬಂದ ನಂತರ ನಿಖರ ಕಾರಣ ತಿಳಿಯುತ್ತದೆ. ಈಗಾಗಲೇ ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಮೃತ ಮಹಿಳೆಯ ಪತಿಗೆ ಹೊರಗುತ್ತಿಗೆ ಆಧಾರದ ಮೇರೆಗೆ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಮೃತ ಮಹಿಳೆಯ ಗಂಡ ರಾಜಪ್ಪ ಮಾತನಾಡಿ, ‘ಹೆರಿಗೆ ಮಾಡಿಸಲು ಇಲ್ಲಿನ ವೈದ್ಯಾಧಿಕಾರಿ ಹತ್ತು ಸಾವಿರ ಲಂಚ ಕೇಳಿದರು. ಹೆರಿಗೆಯ ನಂತರ ಏಳು ಸಾವಿರ ನೀಡಿದ್ದೇವೆ. ಆಟೊವನ್ನು ಒತ್ತೆ ಇಟ್ಟು ಹಣ ನೀಡಿದ್ದೇನೆ’ ಎಂದು ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗೆ ತಿಳಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಹೇಮಾ, ಶಿವಕುಮಾರ್, ಕೆ.ಪಿ ಸತ್ಯನಾರಾಯಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.