ಶಿಡ್ಲಘಟ್ಟ: ತಾಲ್ಲೂಕಿನ ಬೆಳ್ಳೂಟಿ ಕೆರೆ ಮಧ್ಯೆ ಇರುವ ಸುಮಾರು ಆರೂವರೆ ಎಕರೆ ಬಂಡ್(ದ್ವೀಪ)ನಲ್ಲಿ ಸೋಮವಾರ 1250 ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಪರಸರ ಪ್ರೇಮಿ ಬೆಳ್ಳೂಟಿ ಸಂತೋಷ್, ‘ಪ್ರಕೃತಿಯಿಂದ ಎಲ್ಲವನ್ನು ವರವಾಗಿ ಪಡೆದ ಮಾನವ, ಗಿಡ-ಮರ, ನೀರು-ಗಾಳಿ, ಮಣ್ಣು ಎಲ್ಲವನ್ನು ಇಂದು ಅಭಿವೃದ್ಧಿ ಹೆಸರಿನಲ್ಲಿ ನಾಶಮಾಡುತ್ತ ಆಧುನೀಕರಣದ ತೇರನ್ನು ಏರಿ ಹೊರಟಿದ್ದಾನೆ. ಪರಿಸರ ಉಳಿಸುವುದು ಮತ್ತು ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ’ ಎಂದು ಹೇಳಿದರು.
‘ಪರಿಸರ ದಿನಾಚರಣೆಯು ನಮ್ಮ ಜೀವನದ ಬಹುದೊಡ್ಡ ಹಬ್ಬ. ಧಾವಂತದ ಬದುಕಿನಲ್ಲಿ ನಾವು ಅತ್ಯಮೂಲ್ಯ ಪರಿಸರವನ್ನು ಮರೆಯಬಾರದು. 2014ರಿಂದ ಆನೂರು ಗ್ರಾಮ ಪಂಚಾಯಿತಿಯಲ್ಲಿ ನಾವು ಒಂದು ಯಜ್ಞದ ಹಾಗೆ ಪ್ರಾಮಾಣಿಕವಾಗಿ ಗಿಡ ನೆಟ್ಟು ಪೋಷಿಸುತ್ತಾ ಬಂದಿದ್ದೇವೆ. ಸರ್ಕಾರಿ ಜಾಗಗಳನ್ನು ಗುರುತಿಸಿ, ನರೇಗಾ ಯೋಜನೆಯಡಿ ಗಿಡ ನೆಡುವ ಕೆಲಸ ಮಾಡುತ್ತಿದ್ದೇವೆ’ ಎಂದರು.
ಆಲ, ಅರಳಿ, ಅತ್ತಿ, ಬೇವು, ಹಲಸು, ಗಸಗಸೆ ಮುಂತಾದ ಪಕ್ಷಿ, ಕೀಟಗಳಿಗೆ ಪ್ರಿಯವಾದ ಹಣ್ಣಿನ ಮರಗಳನ್ನೇ ನೆಡುತ್ತಿದ್ದೇವೆ. ಸುಂದರ ಹೂ ಬಿಡುವ ಟಬೂಬುಯಾ ಜಾತಿ ಮರಗಳು, ಗುಲ್ ಮೊಹರ್, ಜಕರಂಡಾ ಮುಂತಾದ ಅಲಂಕಾರಿಕ ಮತ್ತು ಮಕರಂಧ ಹೀರುವ ಕೀಟ ಮತ್ತು ಪಕ್ಷಿಗಳಿಗೆ ಪ್ರಿಯವಾದ ಸುಮಾರು 200 ಗಿಡಗಳನ್ನು ಕೆರೆ ದಂಡೆಯಲ್ಲಿ ನೆಡುತ್ತಿದ್ದೇವೆ. ಈ ತಿಂಗಳ ಪೂರ್ತಿ ಗ್ರಾಮ ಪಂಚಾಯಿತಿಯಿಂದ ಹಲವು ಸರ್ಕಾರಿ ಜಾಗಗಳು ಹಾಗೂ ಡಿಪೊ ಜಾಗದಲ್ಲಿ ಗಿಡ ನೆಡುತ್ತೇವೆ ಎಂದು ತಿಳಿಸಿದರು.
ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆ(ಎಫ್ಇಎಸ್)ಯ ಯೋಜನಾ ವ್ಯವಸ್ಥಾಪಕ ಎನ್. ರಮೇಶ್, ಹಿತ್ತಲಹಳ್ಳಿ ಸುರೇಶ್, ಮುನಿರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.