ಶಿಡ್ಲಘಟ್ಟ: ಯುಗಾದಿ ಅಂದರೆ....ವಸಂತನ ಆಗಮನ, ಬೇವು-ಬೆಲ್ಲ ಸೇವನೆ, ಚಿಗುರಿನ ಪಲ್ಲವಿ, ಜೀವಸಂಕುಲದ ಸಂತಸ. ಯುಗಾದಿಯನ್ನು ಪ್ರಕೃತಿಯ ಹಬ್ಬ ಎಂದೇ ಕರೆಯುತ್ತಾರೆ. ನಿಸರ್ಗವು ವಿವಿಧ ರೀತಿಯಲ್ಲಿ ವಸಂತಮಾಸದಲ್ಲಿ ಬರುವ ಯುಗಾದಿ ಹಬ್ಬವನ್ನು ಸ್ವಾಗತಿಸುತ್ತದೆ.
ಶಿಡ್ಲಘಟ್ಟದ ಬೆಂಗಳೂರು ರಸ್ತೆಯಲ್ಲಿ ತಾಲ್ಲೂಕಿನ ಗಡಿಯಲ್ಲಿರುವಅಂಗತಟ್ಟಿಗೇಟ್ಬಳಿ ಹಲವು ಟಬೂಬಿಯಾ ರೋಸಿಯಾ ಮರಗಳು ತಿಳಿಗುಲಾಬಿ ಹೂಗಳೊಂದಿಗೆ ದಾರಿಯಲ್ಲಿ ಹೋಗುವವರನ್ನು ಮತ್ತು ಯುಗಾದಿಯನ್ನು ಸ್ವಾಗತಿಸುತ್ತಿದೆ. ವಿವಿಧೆಡೆ ಆಲದ ಮರಗಳು ಕೆಂಬಣ್ಣದ ಹಣ್ಣುಗಳಿಂದ ತುಂಬಿಕೊಂಡು ಹಕ್ಕಿಗಳ ಕಲರವವನ್ನು ಏರ್ಪಡಿಸಿದೆ. ನೇರಳೆ ಬಣ್ಣದ ಜಖರಂಡ ಹೂಗಳು, ಅಲ್ಲಲ್ಲಿ ಉಳಿದಿರುವ ಗಾಢ ಹಳದಿ ಬಣ್ಣದ ಗಂಟೆ ಹೂಗಳು, ಪರಿಮಳ ಸೂಸುವ ಕಾಡಮಲ್ಲಿಗೆ, ಚಿಗುರಿದ ಮಾವು ಮತ್ತು ಹುಣಸೆ ಕೂಡ ವಸಂತದ ಧ್ವನಿಯಾಗಿವೆ.
‘1908ರಲ್ಲಿ ಲಾಲ್ಬಾಗ್ ಕ್ಯುರೇಟರ್ ಆಗಿ ಬಂದವರು ಕ್ರುಂಬಿಗಲ್. ಅವರು ಲಾಲ್ಬಾಗ್ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ವಿವಿಧ ಬಡಾವಣೆಗಳಿಗೆ, ಮನೆಗಳಿಗೆ ಕೊಂಡೊಯ್ದರು. ಅವರು ಸರಣಿ ಹೂ ಬಿಡುವ ಮರಗಳನ್ನು ನೆಡುವುದನ್ನು ಪ್ರಾರಂಭಿಸಿದರು. ಟಬೂಬಿಯಾ ಜಾತಿಯ ಮರಗಳನ್ನು ಸಾಕಷ್ಟು ನೆಡಲು ಪ್ರೋತ್ಸಾಹಿಸಿದರು.ಅಂಗತಟ್ಟಿಗೇಟ್ನಲ್ಲಿರುವ ಟಬೂಬಿಯಾ ರೋಸಿಯಾ ಮರಗಳನ್ನು ಹಲವು ವರ್ಷಗಳ ಹಿಂದೆ ನಾನೇ ನೆಟ್ಟಿದ್ದೆ. ಸಾಧ್ಯವಾದ ಕಡೆಗಳಲ್ಲೆಲ್ಲಾ ಟಬೂಬಿಯಾ ಜಾತಿಯ ಮರಗಳ ಬೀಜಗಳನ್ನು ಹಾಕುತ್ತಿರುತ್ತೇನೆ’ ಎಂದು ತೋಟಗಾರಿಕೆ ಸಮಾಲೋಚಕ ಮತ್ತು ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.