ADVERTISEMENT

ಚಿಂತಾಮಣಿ | ಏರಿಕೆಯತ್ತ ಟೊಮೆಟೊ ಬೆಲೆ: ರೈತರಿಗೆ ಸಂತಸ

ಎರಡು ವಾರಗಳಿಂದ ಉತ್ತಮ ಧಾರಣೆ

ಎಂ.ರಾಮಕೃಷ್ಣಪ್ಪ
Published 29 ಜುಲೈ 2025, 3:08 IST
Last Updated 29 ಜುಲೈ 2025, 3:08 IST
<div class="paragraphs"><p>ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಮಾರಾಟಕ್ಕೆ ಬಂದಿರುವ ಟೊಮೆಟೊ</p></div>

ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಮಾರಾಟಕ್ಕೆ ಬಂದಿರುವ ಟೊಮೆಟೊ

   

ಚಿಂತಾಮಣಿ: ಟೊಮೆಟೊ ತಾಲ್ಲೂಕು ಸೇರಿದಂತೆ ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆ. ಟೊಮೆಟೊ ಬೆಳೆದು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಈಡಾಗಿದ್ದ ರೈತರು ಈಗ ಸಂತಸದ ದಿನಗಳನ್ನು ಕಾಣುವಂತಾಗಿದೆ.

ಮಾರುಕಟ್ಟೆಯಲ್ಲಿ ಕಳೆದ 15 ದಿನಗಳಿಂದ ಟೊಮೆಟೊ ಬೆಲೆ ನಿಧಾನವಾಗಿ ಏರಿಕೆ ಆಗುತ್ತಿದೆ. ಬೆಳೆಗಾರರ ಸ್ವಲ್ಪ ಸಮಾಧಾನ ತಂದಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಗುಣಮಟ್ಟದ 15 ಕೆ.ಜಿ ಬಾಕ್ಸ್‌ ಟೊಮೆಟೊ ₹ 600ರಿಂದ ₹ 800ರವರೆಗೆ ಮಾರಾಟವಾಯಿತು. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ ₹ 40ರಿಂದ ₹ 60 ಇದೆ. 

ADVERTISEMENT

ಅಲ್ಪ-ಸ್ವಲ್ಪ ನೀರಿನಿಂದಲೇ ಶ್ರಮಪಟ್ಟು ನಾಲ್ಕು ಕಾಸು ಕಾಣುವ ಆಸೆಯಿಂದ ಟೊಮೆಟೊ ಬೆಳೆಯುತ್ತಿದ್ದ ರೈತರು ಕಳೆದ ಒಂದು ವರ್ಷದಿಂದ ಬೆಲೆ ಕಾಣದೆ ತೀವ್ರ ಹತಾಶೆಗೊಂಡಿದ್ದರು.

ಶ್ರಾವಣ ಮಾಸದಲ್ಲಿ ಬೆಲೆ ಏರಿಕೆ ಆಗುತ್ತಿರುವುದು ರೈತರಿಗೆ ಸಂತೋಷ ತಂದಿದೆ. ಕಳೆದ ಒಂದು ವರ್ಷದಿಂದ ನಷ್ಟ ಅನುಭವಿಸಿದ್ದ ರೈತರು ಟೊಮೆಟೊ ಬೆಳೆಯುವುದನ್ನೇ ನಿಲ್ಲಿಸಿ ಬೇರೆ ಬೆಳೆಗಳ ಕಡೆಗೆ ಮುಖ ಮಾಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಮೊದಲಿನಂತೆ ಟೊಮೆಟೊ ಇಳುವರಿಯೂ ಬರುವುದಿಲ್ಲ. ಬೆಲೆಯೂ ಸಿಗುತ್ತಿಲ್ಲ ಎಂಬುದು ಟೊಮೆಟೊ ಬೆಳೆದವರ ಅನಿಸಿಕೆ. ಸಾಮಾನ್ಯವಾಗಿ ಜುಲೈ, ಆಗಸ್ಟ್‌ನಲ್ಲಿ ಬೆಲೆ ಏರಿಕೆ ಆಗುತ್ತದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ರಾಜ್ಯದ ದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾಗಿರುವ ಇಲ್ಲಿನ ಎಪಿಎಂಸಿ ಯಲ್ಲಿ ಯಾವ ಕಡೆಗೆ ದೃಷ್ಟಿ ಹಾಯಿಸಿದರೂ ಟೊಮೆಟೊ ರಾಶಿಗಳು ಈಗ ಕಾಣುತ್ತಿವೆ. ಪ್ರತಿನಿತ್ಯ 70ರಿಂದ 80 ಲಾರಿ ಲೋಡ್ ಆವಕವಾಗುತ್ತದೆ. ಚಿಂತಾಮಣಿ ಮಾರುಕಟ್ಟೆಗೆ ಪೂರೈಕೆಯಾಗುವ ಟೊಮೆಟೊದಲ್ಲಿ ಶೇ 70 ರಷ್ಟು ಗಡಿಭಾಗದ ಆಂಧ್ರಪ್ರದೇಶದಿಂದ ಆವಕವಾಗುತ್ತದೆ.  

ದೆಹಲಿ, ಉತ್ತರಪ್ರದೇಶ, ರಾಜಾಸ್ಥಾನ, ಛತ್ತೀಸ್ ಗಡ, ಗುಜರಾತ್, ಪಂಜಾಬ್, ಜಮ್ಮು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವಾರು ರಾಜ್ಯಗಳಿಗೆ ಇಲ್ಲಿನ ಟೊಮೆಟೊ ರವಾನೆ ಆಗುತ್ತದೆ. ಜತೆಗೆ ಬಾಂಗ್ಲಾ, ಪಾಕಿಸ್ತಾನ ಹಾಗೂ ಕೊಲ್ಲಿ ರಾಷ್ಟ್ರಗಳಿಗೂ ರಫ್ತಾಗುತ್ತದೆ.

ಹಿಮಾಚಲಪ್ರದೇಶದಲ್ಲೂ ಹೆಚ್ಚಾಗಿ ಟೊಮೆಟೊ ಬೆಳೆಯುತ್ತಿದ್ದರು. ಅಲ್ಲಿ ಮಳೆ ಅಧಿಕವಾಗಿರುವುದರಿಂದ ಅಲ್ಲಿಂದ ಪೂರೈಕೆ ಕಡಿಮೆಯಾಗಿದೆ. ಅಲ್ಲಿಂದ ಟೊಮೆಟೊ ಖರೀದಿಸುತ್ತಿದ್ದ ವ್ಯಾಪಾರಿಗಳು ಕರ್ನಾಟಕದತ್ತ ಮುಖ ಮಾಡಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಅಧಿಕವಾಗಿರುವುದೂ ಬೆಲೆ ಹೆಚ್ಚಳಕ್ಕೆ ಪ್ರಮುಖವಾಗಿದೆ. ಬೆಲೆ ಇದೆ, ಆದರೆ ಬೆಳೆ ಇಲ್ಲ. ಬೆಲೆ ಏರಿಕೆಯ ಲಾಭವನ್ನು ಪಡೆಯಲು ಟೊಮೆಟೊ ತೋಟಗಳೇ ಇಲ್ಲ. ರೈತರ ಹಣೆಬರಹವೇ ಹೀಗೆ, ಬೆಳೆ ಇದ್ದರೆ ಬೆಲೆ ಇರುವುದಿಲ್ಲ, ಬೆಲೆ ಇದ್ದರೆ ಬೆಳೆ ಇರುವುದಿಲ್ಲ ಎಂದು ರೈತ ಸಂಘದ ಅಧ್ಯಕ್ಷ ರಮಣಾರೆಡ್ಡಿ ಬೇಸರ ವ್ಯಕ್ತಪಡಿಸುವರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆಯುವುದು ಕಡಿಮೆಯಾಗಿದೆ. ಎಲೆಮುದುಡು ಮತ್ತು ಸೊರಗು ರೋಗಕ್ಕೆ ತುತ್ತಾಗಿ ಬೆಳೆ ನಷ್ಟದಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಬೆಲೆಯೂ ಇಲ್ಲದೆ ಹತಾಶರಾಗಿದ್ದ ಬೆಲೆ ಏರಿಕೆ ಕೊಂಚ ಆಶಾಭಾವ ಮೂಡಿಸಿದೆ. 

ಕಳೆದ ಒಂದು ವರ್ಷದಿಂದ ಬೆಲೆ ಕುಸಿತದಿಂದ ಟೊಮೆಟೊ ಬೆಳೆಗಾರರು ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಿ ಸಾಲಗಾರರಾಗಿದ್ದಾರೆ. ಹೀಗಾಗಿ ಟೊಮೆಟೊ ಬೆಳೆಯುವುದನ್ನೇ ತ್ಯಜಿಸಿದ್ದಾರೆ. ಬೆಳೆಯುವ ಪ್ರದೇಶವೇ ಕಡಿಮೆ ಆಗಿದೆ.  ಸ್ವಲ್ಪಮಟ್ಟಿಗೆ ಬೆಲೆ ಏರಿಕೆಯಾಗಿದ್ದರೂ ರೈತರಿಗೆ ಹೆಚ್ಚಿನ ಅನುಕೂಲ ಆಗುವುದಿಲ್ಲ.
–ಎನ್. ಶಿವಾನಂದ, ಪ್ರಗತಿಪರ ರೈತ, ಅನಕಲ್ ಗ್ರಾಮ.
ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಜಿಲ್ಲೆಯ ರೈತರಿಂದ ಮಾಲು ಬರುತ್ತಿರುವುದು ಕಡಿಮೆ. ಆಂಧ್ರಪ್ರದೇಶ ಮತ್ತಿತರ ಕಡೆಗಳಿಂದ ರವಾನೆ ಆಗುತ್ತಿದೆ. ಇತರೆ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ. ಮಳೆಯ ಕೊರತೆಯಿಂದ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಈ ಹಿನ್ನಲೆಯಿಂದ ಬೆಲೆ ಏರಿಕೆ ಕಾಣುತ್ತಿದೆ.
–ಆನಂದ್, ಟೊಮೆಟೊ ವ್ಯಾಪಾರಿ 
ಟೊಮೆಟೊ ಬೆಳೆಯುವವರೂ ಕಡಿಮೆ. ನೊಣಗಳ ಕಾಟದಿಂದ ಫಸಲೂ ಕಡಿಮೆ. ಹೀಗಾಗಿ ಸಾಧಾರಣ ಬೆಲೆ ಸಿಗುತ್ತಿದೆ. ಆದರೆ ಬೆಲೆ ಏರಿಕೆಯ ಲಾಭ ಪಡೆಯಲು ರೈತರಲ್ಲಿ ಟೊಮೆಟೊ ತೋಟಗಳೇ ಇಲ್ಲ. ಬೆಲೆ ಏರಿಕೆಯಾದರೂ ಅದರಪೂರ್ಣ ಲಾಭ ರೈತರಿಗೆ ದೊರೆಯದೆ  ಮಧ್ಯವರ್ತಿಗಳ ಪಾಲಾಗುತ್ತದೆ.
–ಜೆ.ವಿ.ರಘುನಾಥರೆಡ್ಡಿ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.