ADVERTISEMENT

ಕೆಫೆ ಕಾಫಿ ಡೇ ಆಡಳಿತ ಮಂಡಳಿ ಸಭೆ ಆರಂಭ

ಫುರ್ಖಾನ್‌ ಮೊಹರಕಾನ್‌
Published 30 ಜುಲೈ 2019, 9:43 IST
Last Updated 30 ಜುಲೈ 2019, 9:43 IST
   

ಬೆಂಗಳೂರು: ಪೂರ್ವ ನಿಗದಿಯಾಗಿದ್ದಂತೆಯೇ ನಗರದಲ್ಲಿ ಮಂಗಳವಾರ ಕೆಫೆ ಕಾಫಿ ಡೇ ಆಡಳಿತ ಮಂಡಳಿ ಸಭೆ ಆರಂಭವಾಗಿದೆ. ಆದರೆ ಸೋಮವಾರ ರಾತ್ರಿಯಿಂದೀಚೆಗೆ ಕಂಪನಿಯ ಸಂಸ್ಥಾಪಕ ವಿ.ಜಿ.ಸಿದ್ದಾರ್ಥ ನಾಪತ್ತೆ ಮತ್ತು ಆತ್ಮಹತ್ಯೆ ವದಂತಿಗಳ ಹಿನ್ನೆಲೆಯಲ್ಲಿ ಸಭೆಯಲ್ಲಿ ಏನು ಚರ್ಚೆಯಾಗಬಹುದು ಮತ್ತು ಹೊರಬೀಳಬಹುದಾದ ಮಾಹಿತಿಯ ಬಗ್ಗೆ ಗೊಂದಲಗಳು ಮನೆ ಮಾಡಿವೆ.

ಜೂನ್ 2019ಕ್ಕೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದ ಫಲಿತಾಂಶಗಳನ್ನು ಪ್ರಕಟಿಸುವ ಉದ್ದೇಶದಿಂದ ಸಭೆ ಕರೆಯಲಾಯಿತು. ಕೆಫೆ ಕಾಫಿ ಡೇ ಕಂಪೆನಿಯನ್ನು ಕೋಕಾಕೋಲಾಕ್ಕೆ ಮಾರುವ ಮಾತುಕತೆಗಳ ಸ್ಥಿತಿಗತಿಗಳ ವಿಚಾರವೂ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇತ್ತು.

‘ಸಭೆಯೇನೋ ಶುರುವಾಗಿದೆ. ಆದರೆ ಸಭೆಯ ಘೋಷಣೆ ಏನಾಗಿರಬಹುದು, ಯಾವ ಮಾಹಿತಿ ಹೊರಬೀಳಬಹುದು ಎಂಬುದರ ಬಗ್ಗೆ ಗೊಂದಲ ಮೂಡಿದೆ’ ಎಂದು ಮೂಲಗಳು ಹೇಳಿವೆ. ತ್ರೈಮಾಸಿಕ ಫಲಿತಾಂಶ ಘೋಷಣೆಗೆ ಕೆಲವೇ ಗಂಟೆಗಳು ಮೊದಲು ಕಂಪೆನಿಯು ಷೇರು ಮಾರುಕಟ್ಟೆಗೆ ಪ್ರವರ್ತಕರು ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದೆ.

ADVERTISEMENT

‘ಕಂಪನಿಯು ವೃತ್ತಿಪರ ನಾಯಕತ್ವ ಹೊಂದಿದೆ. ಸಮರ್ಥವಾಗಿ ಮುನ್ನಡೆಯುತ್ತಿದೆ. ಎಂದಿನಂತೆ ತನ್ನ ವ್ಯವಹಾರ ಮುಂದುವರಿಸಲಿದೆ’ ಎಂದು ಕಾಫಿ ಡೇ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.