
ಚಿಕ್ಕಮಗಳೂರು: ‘ಕಾಡು ನಾಶದಿಂದ ಆನೆಗಳು ನಡಿಗೆ ಬರುತ್ತಿವೆ. ಆನೆ ಹಾವಳಿಯಿಂದ ಇತ್ತೀಚೆಗೆ ಇಬ್ಬರು ಮೃತಪಟ್ಟಿದ್ದಾರೆ, ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು...’
ಹೀಗೆ ಆನೆ ಮಾನವ ಸಂಘರ್ಷದ ವಿಷಯ ಪ್ರಸ್ತಾಪವಾಗಿದ್ದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲೆ ವಿಭಾಗದ ಯುವ ಸಂಸತ್ ಸ್ಪರ್ಧೆಯಲ್ಲಿ.
ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬರು ವಿಷಯ ಪ್ರಸ್ತಾಪಿಸಿ, ‘ಶೃಂಗೇರಿ ಬಳಿ ಇತ್ತೀಚೆಗೆ ಇಬ್ಬರ ಪ್ರಾಣವನ್ನು ಕಾಡಾನೆ ಬಲಿ ತೆಗೆದುಕೊಂಡಿದೆ. ಇದಕ್ಕೆ ಸರ್ಕಾರವೇ ಹೊಣೆ. ಆನೆ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿನಿ ಕೂಡ ಇದೇ ವಿಷಯ ಪ್ರಾಸ್ತಾಪಿಸಿದರು. ಕಾಡು ನಾಶದಿಂದ ಆನೆ ಸೇರಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಕಾಡು ರಕ್ಷಣೆಯಾಗಬೇಕು, ಕಾಡುಪ್ರಾಣಿಗಳೂ ಉಳಿಯಬೇಕು. ಕಾಡಂಚಿನಲ್ಲಿ ಇರುವ ಜನರ ರಕ್ಷಣೆಯೂ ಆಗಬೇಕು ಎಂದರು.
‘ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಸಹ ಸಮಯಕ್ಕೆ ಸರಿಯಾಗಿ ಶಾಲೆ–ಕಾಲೇಜುಗಳಿಗೆ ಬರಲು ಸಾಧ್ಯವಾಗದೆ ಪಾಠ–ಪ್ರವಚನಗಳಿಗೆ ತೊಂದರೆಯಾಗಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸವೂ ಆರಂಭವಾಗಿಲ್ಲ’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಹೇಳಿದರು.
ಬಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಗ್ರಾಮೀಣ ಪ್ರದೇಶಕ್ಕೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳಿಗೆ ಐದು ವರ್ಷಗಳಿಂದ ಸೈಕಲ್ ನೀಡುವುದನ್ನು ನಿಲ್ಲಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಷ್ಟವಾಗಿದೆ ಎಂದರು.
‘ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಸೈಕಲ್ ಕೂಡ ನೀಡಲಾಗುತ್ತಿದೆ. ಕೆಲವೆಡೆ ಬಸ್ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಇದು ವಿರೋಧ ಪಕ್ಷದವರ ಗಮನಕ್ಕೆ ಬಂದಿಲ್ಲ ಎನ್ನಿಸುತ್ತದೆ’ ಎಂಬ ಉತ್ತರವನ್ನು ಆಡಳಿತ ಪಕ್ಷದವರು ನೀಡಿದರು.
ಬಸ್ಗಳ್ನು ಖರೀದಿಸಿ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸುವ ಸಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಾರಿಗೆ ಸಚಿವರ ಸ್ಥಾನದಲ್ಲಿದ್ದ ವಿದ್ಯಾರ್ಥಿ ಉತ್ತರ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸೇರಿ ಮೂಲಸೌಕರ್ಯ ಇಲ್ಲ. ಸರಿಪಡಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಪ್ರಶ್ನಿಸಿದರು.
‘ಶಾಲೆಗಳಲ್ಲಿ ಶೌಚಾಲಯ ಸೇರಿ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಯಾವ ಶಾಲೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ನಿಖರವಾಗಿ ತಿಳಿಸಿದರೆ ಅಧಿಕಾರಿಗಳನ್ನು ಕಳುಹಿಸಿ ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆಡಳಿತ ಪಕ್ಷದ ಸಾಲಿನಲ್ಲಿದ್ದ ವಿದ್ಯಾರ್ಥಿಗಳು ಸಮರ್ಥಿಸಿಕೊಂಡರು.
ಯಾವ ಕಲಾಪಗಳಿಗೂ ಕಡಿಮೆ ಇಲ್ಲ ಎಂಬಂತೆ ಜಿಲ್ಲೆಯ ವರ್ತಮಾನದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಯುವ ಸಂಸತ್ನಲ್ಲಿ ಪ್ರಸ್ತಾಪಿಸಿದರು. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದಿರುವ ಕುರಿತು, ಬುಡಕಟ್ಟು ಜನರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಚರ್ಚೆ ನಡೆಸಿದರು.
ಕಳಸಾಪುರ ಕರ್ನಾಟಕ ಪಬ್ಲಿಕ್ ಶಾಲೆಯ(ಕೆಪಿಎಸ್) ಸಿಂಚನಾ ಆರ್. ಪ್ರಕಾಶ್ ಮತ್ತು ಗುಬ್ಬಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗಗನ್ ನಾಯ್ಕ್ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆಯಾದರು.
ಯುವ ಸಂಸತ್ ಸ್ಪರ್ಧೆಯ ನೂಡಲ್ ಅಧಿಕಾರಿ ಕೆ.ಜಿ. ಕಾಂತರಾಜ್, ಶಿಕ್ಷಣಾಕಾರಿ ನಾಗರಾಜ್, ಯುವ ಸಂಸತ್ ಸ್ಪರ್ಧೆ ಸಮಿತಿಯ ಸದಸ್ಯ ಎಸ್.ಆರ್. ಸತೀಶ್, ಮಹದೇವಪ್ಪ ಕುಂದರಗಿ, ಲಕ್ಷ್ಮಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಜಿ. ನೀಲಕಂಠಪ್ಪ ಇದ್ದರು.
‘ನಾಯಕನಾಗಲು ಅಡ್ಡದಾರಿ ಇಲ್ಲ’
‘ನಾಯಕನಾಗಲು ಅಡ್ಡದಾರಿ ಇಲ್ಲ. ಜನ ಪರವಾದ ಕೆಲಸಗಳಿಂದ ಮಾತ್ರ ನಾಯಕನಾಗಲು ಸಾಧ್ಯ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
‘ಡೊನೇಷನ್ ನೀಡಿದರೆ ದಾನಿಗಳಾಗಬಹುದು. ನಾಯಕನಾಗಲು ಸಾಧ್ಯವಿಲ್ಲ. ಫ್ಲೆಕ್ಸ್ ಹಾಕಿ ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್ ಹಾಕಿ ವಾಟ್ಸ್ಆ್ಯಪ್ ಫೇಸ್ಬುಕ್ ನಾಯಕನಾಗಬಹುದು. ಜನನಾಯಕನಾಗಲು ಸಾಧ್ಯವಿಲ್ಲ’ ಎಂದರು.
ರಾಜಕೀಯ ಕ್ಷೇತ್ರಕ್ಕೆ ಉತ್ತಮ ವ್ಯಕ್ತಿಗಳ ಪ್ರವೇಶದ ಅಗತ್ಯ ಇದೆ. ರಾಜಕೀಯ ಕಡೆಗಣಿಸುವ ಕ್ಷೇತ್ರ ಅಲ್ಲ. ರಾಜಕೀಯಕ್ಕೆ ಪ್ರವೇಶ ಮಾಡುವವರಿಗೆ ವಿಷಯ ಜ್ಞಾನ ಹಾಗೂ ಆತ್ಮ ವಿಶ್ವಾಸ ಮುಖ್ಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.