ಬೀರೂರು: ಪಟ್ಟಣದ ಕರಗಲ್ ಬೀದಿಯಲ್ಲಿರುವ ಪಾಂಡುರಂಗ ರುಕುಮಾಯಿ ದೇವಾಲಯದಲ್ಲಿ ಮಂಗಳವಾರ ಶ್ರಾವಣ ಶುದ್ಧ ದ್ವಾದಶಿ ಅಂಗವಾಗಿ ದಿಂಡಿ ಉತ್ಸವ ನೆರವೇರಿತು.
ದೇವಾಲಯ ವತಿಯಿಂದ 80ನೇ ವರ್ಷದ ಉತ್ಸವ ಆಚರಣೆ ನೆನಪಿನಲ್ಲಿ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾನುವಾರ, ದೇವಸ್ಥಾನದ ಎದುರು ನಿರ್ಮಿಸಿದ ನೂತನ ಕೊಠಡಿಗಳ ಉದ್ಘಾಟನೆ ಸಲುವಾಗಿ ಪುಣ್ಯಾಹ, ವಾಸ್ತುಪೂಜೆ, ಗಣಪತಿ ಹೋಮ ಮತ್ತು ವಾಸ್ತು ಹೋಮ ನಡೆಸಲಾಯಿತು.
ಸೋಮವಾರ ಬೆಳಗ್ಗೆ ಕೊಠಡಿಗಳ ಪ್ರವೇಶೋತ್ಸವ, ಪಾಂಡುರಂಗ ಸ್ವಾಮಿಗೆ ಅಭಿಷೇಕ, ಸಹಸ್ರ ನಾಮಾರ್ಚನೆ, ತೀರ್ಥ-ಪ್ರಸಾದ ವಿನಿಯೋಗ ನಡೆಯಿತು.
ದಿಂಡಿ ಉತ್ಸವದ ಅಂಗವಾಗಿ ಸಂಜೆ ಪೋತಿ ಸ್ಥಾಪನೆ ನಡೆಯಿತು. ದಾವಣಗೆರೆಯ ಪುಂಡಲೀಕ ರಾವ್ ಗಡ್ಡಾಳೆ, ಶಿವಮೊಗ್ಗದ ಗೋಪಾಲರಾವ್ ನಾಮಜಪ, ಪ್ರವಚನ ನಡೆಸಿದರು. ಶಿವಮೊಗ್ಗದ ಹನುಮಂತರಾವ್ ರಂಗಧೋಳ್ ಪಂಢರಿ ಸಾಂಪ್ರದಾಯಿಕ ಕೀರ್ತನೆ ಹಾಡಿದರೆ, ಬೀರೂರು ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯವರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ರಾತ್ರಿ ಪಂಚಪದಿ ಪಾವೂಲ್ ಭಜನೆಯ ನಂತರ ಮಂಗಳವಾರ ಬೆಳಗಿನ ಕಾಕಡಾರತಿವರೆಗೆ ಪಾಳಿ ಭಜನೆ ಹಾಗೂ ಭಾರೋಡ್ ಅಂಗವಾಗಿ ಶಿಕಾರಿಪುರದ ಶೃತಿ ಪೃಥ್ವಿರಾಜ್, ಅಮೃತಾ ಗಿರಿಧರ್, ತುಕಾರಾಮರಾವ್ ರಂಗಧೋಳ್, ವಿಠಲ ರಂಗಧೋಳ್ ಸಂತವಾಣಿ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಿಗೆ ಪಾಂಡುರಂಗ ರುಕುಮಾಯಿಯವರ ಉತ್ಸವ ಮೂರ್ತಿಗಳ ರಾಜಬೀದಿ ಉತ್ಸವ ನಡೆಯಿತು. ಬದರಿನಾಥ್ ಅವರಿಂದ ಕಾಲಾ ಕೀರ್ತನೆಯ ಬಳಿಕ ದೇವಾಲಯ ಅಭಿವೃದ್ಧಿಗೆ ನೆರವು ನೀಡಿದವರಿಗೆ ಗೌರವ ಸಮರ್ಪಣೆ, ಮಹಾಮಂಗಳಾರತಿ, ಅನ್ನ ಸಂತರ್ಪಣೆಗಳು ನಡೆದವು. ಎಂ.ಕೆ.ಕೃಷ್ಣಪ್ರಸಾದ್ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಭಾರೋಡ್ಕರಿಗಳಾಗಿ ಬಸವಾಪಟ್ಟಣದ ಮೋಹನ ರಾವ್, ಭದ್ರಾವತಿಯ ಅಂಬಾಜಿರಾವ್ ಸೇವೆ ಸಲ್ಲಿಸಿದರು. ಭಾವಸಾರ ಕ್ಷತ್ರಿಯ ಮಂಡಳಿ ಪಾಂಡುರಂಗರಾವ್ ಜಿಂಗಾಡೆ, ಬಿ.ಆರ್.ಪಾಂಡುರಂಗರಾವ್, ಪುಂಡಲೀಕರಾವ್ ಖಾಂಡ್ಕೆ, ವಿನಾಯಕ ಬಾಂಗ್ರೆ, ರವಿಕುಮಾರ ಜಿಂಗಾಡೆ, ಧರಣೇಶ್ ಮಹಳತ್ಕರ್, ಕುಮಾರರಾವ್, ಮಾಲತೇಶ್ ಬಾಂಗ್ರೆ, ಬಿ.ಪಿ.ಪ್ರಭಾಕರರಾವ್ ಪಾಲ್ಗೊಂಡರು. ಶುಕ್ರವಾರ ಸತ್ಯನಾರಾಯಣ ಸ್ವಾಮಿ ವ್ರತ, ಗೋಪಾಲಕಾಲಾ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದೊಂದಿಗೆ ದಿಂಡಿ ಆಚರಣೆಗೆ ತೆರೆ ಬೀಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.