ಚಳ್ಳಕೆರೆ: ಹಿಂಗಾರು ಹಂಗಾಮಿನಲ್ಲಿ ತಡವಾಗಿ ಬಿತ್ತನೆ ಮಾಡಿದ್ದ ಈರುಳ್ಳಿ ತಾಲ್ಲೂಕಿನಲ್ಲಿ ಕಟಾವಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿರುವ ಕಾರಣ ರೈತರು ಕಂಗಾಲಾಗಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 40ರವರೆಗೂ ಮಾರಾಟವಾಗುತ್ತಿದೆ. ಆದರೆ ರೈತರಿಂದ ಖರೀದಿಸುವ ಸಗಟು ಈರುಳ್ಳಿ 100 ಕೆ.ಜಿ ಬ್ಯಾಗ್ ಕೇವಲ ₹300– ₹500ಕ್ಕೆ ಮಾರಾಟವಾಗುತ್ತಿದೆ. ಹೆಚ್ಚು ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವ ಕಾರಣ ಬೆಲೆ ಕುಸಿತ ಉಂಟಾಗಿದ್ದು ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.
ತಾಲ್ಲೂಕಿನ ಬಾಲೇನಹಳ್ಳಿ, ಕುರುಡಿಹಳ್ಳಿ, ರಾಮಜೋಗಿಹಳ್ಳಿ, ಸೋಮಗುದ್ದು, ದೇವರಮರಿಕುಂಟೆ, ನಾರಾಯಣಪುರ, ದೊಡ್ಡಉಳ್ಳಾರ್ತಿ, ನೇರಲಗುಂಟೆ, ನಾಯಕನಹಟ್ಟಿ, ಗಂಜಿಗುಟೆ, ದುರ್ಗಾವರ ಮುಂತಾದ ಗ್ರಾಮದದಲ್ಲಿ ಈರುಳ್ಳಿ ಕಟಾವು ಮಾಡುತ್ತಿದ್ದು ಬೆಲೆ ಕುಸಿತದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಬೆಳೆ ಕಟಾವು ಮಾಡಿರುವ ಬೆಳೆಗಾರರು, ಅಧಿಕ ಬೆಲೆ ನಿರೀಕ್ಷಿಸಿ ಈರುಳ್ಳಿ ಸ್ವಚ್ಛಗೊಳಿಸಿ ಚೀಲಕ್ಕೆ ತುಂಬಿ ಸಂಗ್ರಹಿಸಿಟ್ಟುಕೊಂಡು ಮಾರಾಟಕ್ಕೆ ಕಾಯುತ್ತಿದ್ದಾರೆ. ಆದರೆ ಬೆಲೆಯೇ ಇಲ್ಲದ ಕಾರಣ ಮಾರಾಟ ಮಾಡಲು ಕಷ್ಟಪಡುವಂತಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಅದರ ಲಾಭ ರೈತರಿಗೆ ಸಿಗದಂತಾಗಿದೆ.
ಈರುಳ್ಳಿ ಗಾತ್ರ ಮತ್ತು ಬಣ್ಣ ಬಹಳ ಉತ್ಕೃಷ್ಟವಾಗಿದೆ. ಮಹಾರಾಷ್ಟ್ರದ ಸಾಸಿಕ್ನಿಂದ ಗಡ್ಡೆ ತಂದು ಬಿತ್ತನೆ ಮಾಡಿದ್ದಾರೆ. ನಾಸಿಕ್ ಗಡ್ಡೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವ ಕಾರಣ ಸ್ಥಳೀಯ ರೈತರು ಅದೇ ಬಿತ್ತನೆ ಬೀಜ ತಂದು ನಾಟಿ ಮಾಡಿ ಬೆಳೆ ತೆಗೆದಿದ್ದಾರೆ. ಆದರೆ ಬೆಲೆ ಕುಸಿತದ ಕಾರಣದಿಂದ ನಷ್ಟ ಅನುಭವಿಸುತ್ತಿದ್ದಾರೆ.
‘ಬೇಸಿಗೆಯಲ್ಲಿ ಬೆಳೆ ಬರುವುದೇ ಕಷ್ಟ. ಆ ಪರಿಸ್ಥಿತಿಯಲ್ಲೂ ಉತ್ತಮವಾಗಿ ಬೆಳೆ ತೆಗೆದಿದ್ದೇವೆ. ಗೊಬ್ಬರ ಹಾಗೂ ಕಾರ್ಮಿಕರ ಕೂಲಿ ಸೇರಿ ಪ್ರತಿ ಎಕರೆಗೆ ₹50000ದಿಂದ ₹60,000 ಬಂಡವಾಳ ಹಾಕಿ 3 ಎಕರೆ ಪ್ರದೇಶದಲ್ಲಿ ಉತ್ತಮ ಇಳುವರಿಯಲ್ಲಿ ಈರುಳ್ಳಿ ಬೆಳೆದಿದ್ದೇನೆ. ಹೊಲಕ್ಕೆ ಬಂದ ಖರೀದಿದಾರರು ಬಾಯಿಗೆ ಬಂದ ಬೆಲೆಗೆ ಕೇಳುತ್ತಾರೆ. ಯಾಕಾದರೂ ಈರುಳ್ಳಿ ಬೆಳೆದೆನೋ ಎನಿಸುತ್ತಿದೆ’ ಎಂದು ದೇವರ ಮರಿಕುಂಟೆ ಗ್ರಾಮದ ಪ್ರಗತಿಪರ ರೈತ ಆರ್.ಎ.ದಯಾನಂದ ಮೂರ್ತಿ ಅಳಲು ತೋಡಿಕೊಂಡರು.
‘ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆ ಹಿಂದು-ಮುಂದೆ ಅಂದರೆ ಮಾರ್ಚ್ ತಿಂಗಳ ಅಂತ್ಯದಲ್ಲಿ ಈ ಭಾಗದಲ್ಲಿ ಈರುಳ್ಳಿ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಹಿಂಗಾರು ಹಂಗಾಮಿನಲ್ಲಿ ತಡವಾಗಿ ಬಿತ್ತನೆ ಮಾಡಿದ ಬೆಳೆ ಈಗ ಕಟಾವಿಗೆ ಬಂದಿದೆ. ನಾಸಿಕ್ನಲ್ಲಿ ಬೆಳೆದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವುದರಿಂದ ಈ ಪ್ರದೇಶದಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದಿಲ್ಲ’ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಹೇಳಿದರು.
‘ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನ ಈರುಳ್ಳಿ ಬೆಳೆ ಎಷ್ಟು ಬಂದಿದೆ ಎಂಬ ಮಾಹಿತಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಇಲ್ಲ. ಅವರು ಕಚೇರಿಯಲ್ಲಿ ಕುಳಿತು ಈರುಳ್ಳಿ ಕಡಿಮೆ ಇದೆ ಎನ್ನುತ್ತಾರೆ. ಅವರು ರೈತರ ಜಮೀನುಗಳಿಗೆ ಹೋಗಿ ನೋಡಲಿ. ಆಗ, ಬೆಲೆ ಕುಸಿತದಿಂದ ಬೆಳೆಗಾರರು ಅನುಭವಿಸುತ್ತಿರುವ ಕಷ್ಟ ಅವರಿಗೆ ತಿಳಿಯುತ್ತದೆ’ ಎಂದು ರೈತ ತಿಪ್ಪೇಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.