ಹೊಸದುರ್ಗ: ರೈತ ವಿರೋಧಿ ಕಾನೂನು ವಾಪಸ್ ಪಡೆಯುವಂತೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಪರವಾಗಿ ಹಿರಿಯ ಸಾಹಿತಿ ಹಂಪನಾ ಹೋಗಿದ್ದು ಅಭಿನಂದನಾರ್ಹ. ಆದರೆ, ಪೊಲೀಸರು ಹಂಪನಾ ಅವರನ್ನು ವಿಚಾರಣೆ ಮಾಡಿರುವುದು ಖಂಡನೀಯ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಚಳಿ, ಮಳೆ, ಬಿಸಿಲೆನ್ನದೆ ರೈತರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಒಂದು ತಿಂಗಳಿಂದ ಹೊಸದಾಗಿ ಜಾರಿಗೊಳಿಸಲಿರುವ ಮೂರು ರೈತವಿರೋಧಿ ಕಾನೂನುಗಳನ್ನು ವಾಪಾಸ್ ಪಡೆಯಲು ಸಂಘಟಿತ ಹೋರಾಟ ಮಾಡುತ್ತಿದ್ದಾರೆ. ಎಲ್ಲ ರಾಜಿ- ಸಂಧಾನಗಳು ಮುರಿದುಬಿದ್ದಿವೆ. ಈ ನಾಡಿನ ಬೆನ್ನೆಲುಬು ರೈತರು ಎಂದು ವಿವರಿಸಬೇಕಾಗಿಲ್ಲ. ನಮಗೆ ಅನ್ನ ಕೊಡುವ ರೈತರನ್ನು ಯಾರೂ ಉಪೇಕ್ಷೆ ಮಾಡಬಾರದು.
ಸರ್ಕಾರದ ರೈತವಿರೋಧಿ ನೀತಿಯನ್ನು ವಿರೋಧಿಸಿ ಸಾರ್ವಜನಿಕರು, ಸಾಹಿತಿಗಳು, ಮಠಾಧೀಶರು, ಪ್ರಗತಿಪರರು ರೈತರ ಪರವಾಗಿ ನಿಲ್ಲಬೇಕಾದ್ದು ನಿಜವಾದ ಮಾನವೀಯತೆ. ಆ ಕೆಲಸವನ್ನು ಹಿರಿಯ ಸಾಹಿತಿ ಹಂಪನಾ ಅವರು ಮಾಡಿದ್ದು ಸ್ವಾಗತಾರ್ಹ. ಇಂತಿರುವಾಗ ಅವರಿಂದ ಪೋಲಿಸರು ಮುಚ್ಚಳಿಕೆ ಬರೆಸಿಕೊಂಡಿದ್ದರೆ ಅದು ಪ್ರತಿಭಟನಾರ್ಹ. ಸರ್ಕಾರ ಅಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.