
ಹಿರಿಯೂರು: ನಗರದ ನೆಹರು ಮೈದಾನದಲ್ಲಿ ನಿರ್ಮಿಸಿರುವ ಕುಂಚಬ್ರಹ್ಮ ಪಿ.ಆರ್. ತಿಪ್ಪೇಸ್ವಾಮಿ ಮಹಾದ್ವಾರದಲ್ಲಿ ರಾಜಮಾತೆ ಕೆಂಪನಂಜಮ್ಮಣ್ಣಿ ವೇದಿಕೆಯಲ್ಲಿ ಫೆ. 7ರಂದು ನಡೆಯಲಿರುವ ಏಳನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಿಗ್ಗೆ 7.30ಕ್ಕೆ ತಹಶೀಲ್ದಾರ್ ಎಂ. ಸಿದ್ದೇಶ್ ರಾಷ್ಟ್ರಧ್ವಜವನ್ನು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಪರಿಷತ್ತಿನ ಧ್ವಜವನ್ನು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ರಾಮಚಂದ್ರಪ್ಪ ನಾಡಧ್ವಜವನ್ನು ಆರೋಹಣ ಮಾಡುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ನಗರದ ತೇರುಮಲ್ಲೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಎಂ.ಜಿ. ರಂಗಸ್ವಾಮಿ ಅವರನ್ನು ಮೆರವಣಿಗೆಯ ಮೂಲಕ ನೆಹರು ಮೈದಾನದಲ್ಲಿನ ವೇದಿಕೆಗೆ ಕರೆತರಲಾಗುವುದು.
ಬೆಳಿಗ್ಗೆ 11 ಗಂಟೆಗೆ ನಾಡಗೀತೆ, ರೈತಗೀತೆ, ಸ್ವಾಗತ ನೃತ್ಯದ ನಂತರ, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಬಂಡಾಯ ಸಾಹಿತಿ ಡಾ. ಕಾಳೇಗೌಡ ನಾಗವಾರ ಉದ್ಘಾಟಿಸುತ್ತಾರೆ. ಪ್ರಾಂಶುಪಾಲ ಪ್ರೊ.ಆರ್. ಮಹೇಶ್ ಆಶಯ ನುಡಿಗಳನ್ನು ಆಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕರಿಯಪ್ಪ ಮಾಳಿಗೆ ನೂತನ ಅಧ್ಯಕ್ಷ ಎಂ.ಜಿ. ರಂಗಸ್ವಾಮಿ ಅವರಿಗೆ ಪರಿಷತ್ತಿನ ಧ್ವಜ ಹಸ್ತಾಂತರಿಸಲಿದ್ದಾರೆ.
ಸಮಾರಂಭದಲ್ಲಿ ಜಬೀವುಲ್ಲಾ ಎಂ ಅಸಾದ್, ಎಂ.ಆರ್.ಅನುಸೂಯ, ಕೆ.ಎಂ. ಶಿವಸ್ವಾಮಿ, ಸಿ.ರಾಮಚಂದ್ರಪ್ಪ ಅವರ ಪುಸ್ತಕಗಳನ್ನು ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ರುದ್ರಣ್ಣ ಹರ್ತಿಕೋಟೆ ಬಿಡುಗಡೆ ಮಾಡಲಿದ್ದಾರೆ.
ಸಂಸದ ಗೋವಿಂದ ಕಾರಜೋಳ ಹಾಗೂ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ವಿವಿಧ ನಿಗಮ–ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿರುವರು.
ಮಧ್ಯಾಹ್ನ 12.30ಕ್ಕೆ ಹಿರಿಯೂರು ತಾಲ್ಲೂಕಿನ ಇತಿಹಾಸ ಮತ್ತು ಸಂಸ್ಕೃತಿ ವಿಚಾರ ಕುರಿತ ಮೊದಲ ಗೋಷ್ಠಿ, ಮಧ್ಯಾಹ್ನ 2 ಗಂಟೆಗೆ ಸಮ್ಮೇಳನಾಧ್ಯಕ್ಷರ ಕುರಿತು ಒಡನಾಟದ ಮಾತುಗಳು, ಮಧ್ಯಾಹ್ನ 3 ಗಂಟೆಗೆ ಕವಿಗೋಷ್ಠಿ, 4.30ಕ್ಕೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ 5.30 ಗಂಟೆಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ. ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ ನಿರ್ಣಯ ಮಂಡಿಸಲಿದ್ದು, ಸಮ್ಮೇಳನಾಧ್ಯಕ್ಷ ಎಂ.ಜಿ. ರಂಗಸ್ವಾಮಿ ಮಾತನಾಡುತ್ತಾರೆ.
ಗ್ರಾಮೀಣ ಭಾಗಕ್ಕೂ ಆದ್ಯತೆ
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಎಷ್ಟು ವರ್ಷಕ್ಕೆ ಒಮ್ಮೆ ನಡೆದಿದೆ ಎಂಬುದಕ್ಕಿಂತ ನಡೆದಿರುವ ಸಮ್ಮೇಳನಗಳು ಎಷ್ಟು ಮೌಲ್ಯಯುತವಾಗಿದ್ದವು ಎಂದು ನೋಡಬೇಕು. ನಮ್ಮಲ್ಲಿ ನಡೆದಿರುವ ಎಲ್ಲಾ ಸಮ್ಮೇಳನಗಳು ಅರ್ಥಪೂರ್ಣವಾಗಿ ನಡೆದಿವೆ. ಇನ್ನು ಮುಂದೆ ಸಾಧ್ಯವಾದಷ್ಟೂ ಪ್ರತಿ ವರ್ಷ ನಗರವನ್ನು ಹೊರತುಪಡಿಸಿ ಗ್ರಾಮೀಣ ಭಾಗದಲ್ಲೂ ಸಮ್ಮೇಳನ ಆಯೋಜಿಸುವ ಬಗ್ಗೆ ಚಿಂತಿಸುತ್ತೇವೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಜಿ. ಪ್ರೇಮ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.