ADVERTISEMENT

ಅನೈತಿಕ ಚಟುವಟಿಕೆಯ ತಾಣವಾದ ಪಾಳು ಕಟ್ಟಡ

ದಾರಿಹೋಕರಿಗೆ ಭಯ ಹುಟ್ಟಿಸುತ್ತಿರುವ ಬಿಎಸ್‌ಎನ್‌ಎಲ್‌ ದೂರವಾಣಿ ಸಂಪರ್ಕ ಕಚೇರಿ ಕಟ್ಟಡ

ವಿ.ವೀರಣ್ಣ
Published 7 ಸೆಪ್ಟೆಂಬರ್ 2021, 2:38 IST
Last Updated 7 ಸೆಪ್ಟೆಂಬರ್ 2021, 2:38 IST
ಧರ್ಮಪುರ ಸಮೀಪದ ಮದ್ದಿಹಳ್ಳಿಯಲ್ಲಿರುವ ಪಾಳುಬಿದ್ದ ಕಟ್ಟಡ ಅನೈತಿಕ ಚಟುವಟಿಕೆಯ ತಾಣವಾಗಿದೆ.
ಧರ್ಮಪುರ ಸಮೀಪದ ಮದ್ದಿಹಳ್ಳಿಯಲ್ಲಿರುವ ಪಾಳುಬಿದ್ದ ಕಟ್ಟಡ ಅನೈತಿಕ ಚಟುವಟಿಕೆಯ ತಾಣವಾಗಿದೆ.   

ಧರ್ಮಪುರ: ಹೋಬಳಿಯ ಗಡಿ ಗ್ರಾಮವಾದ ಮದ್ದಿಹಳ್ಳಿಯಿಂದ 1 ಕಿ.ಮೀ ದೂರದಲ್ಲಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಿಎಸ್ಎನ್ಎಲ್‌ಗೆ ಸೇರಿದ ಪಾಳು ಕಟ್ಟಡ ಈಗ ಅನೈತಿಕ ಚಟುವಟಿಕೆಯ ತಾಣವಾಗಿದೆ.

20 ವರ್ಷಗಳ ಹಿಂದೆ ಕಟ್ಟಲಾಗಿರುವ ಈ ಕಟ್ಟಡ ಬಿಎಸ್ಎನ್ಎಲ್ ದೂರವಾಣಿ ಸಂಪರ್ಕ ಕಚೇರಿಗೆ ಸಂಬಂಧಿಸಿದೆ. ಆದರೆ, ಈವರೆಗೂ ಅದು ಆರಂಭವಾಗದೇ ಜೂಜುಗಾರರ, ಮದ್ಯ ವ್ಯಸನಿಗಳ ಮತ್ತು ಅನೈತಿಕ ಚಟುವಟಿಕೆಯ ಅಡ್ಡೆಯಾಗಿದೆ.

15–20 ವರ್ಷಗಳ ಹಿಂದೆ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನಲ್ಲಿ ನಕ್ಸಲರ ಚಟುವಟಿಕೆ ಕ್ರಿಯಾಶೀಲವಾಗಿದ್ದ ಸಂದರ್ಭದಲ್ಲಿ ಧರ್ಮಪುರ ಹೋಬಳಿಯ ಖಂಡೇನ
ಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಧರ್ಮಪುರ, ಹೊಸಕೆರೆ ಮತ್ತಿತರ ಗಡಿ ಗ್ರಾಮಗಳು ಅವರ ವಾಸಸ್ಥಾನ
ವಾಗಿದ್ದವು. ಅದಕ್ಕಾಗಿ ಪೊಲೀಸ್ ಇಲಾಖೆ ಸದಾ ಗಸ್ತು ನಡೆಸುತ್ತಿತ್ತು. ಆಗ ಮೊಬೈಲ್ ಬಳಕೆ ಬಹಳ ಕಡಿಮೆ ಇತ್ತು. ಹೀಗಾಗಿ ಡಿ.ಮಂಜುನಾಥ್ ಸಚಿವರಾಗಿದ್ದ ಸಂದರ್ಭದಲ್ಲಿ ಬಿಎಸ್ಎನ್ಎಲ್ ದೂರವಾಣಿ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಿಸಲು ಅನುದಾನ ಕಲ್ಪಿಸಿಕೊಟ್ಟಿದ್ದರು. ಕೋಟ್ಯಂತರ ರೂಪಾಯಿ ವೆಚ್ಚದ ಟವರ್ ಮತ್ತು ಕಟ್ಟಡ ನಿರ್ಮಾಣಗೊಂಡವು. ಆದರೆ, ಕಟ್ಟಡ ಇಲಾಖೆಗೆ ಹಸ್ತಾಂತರವಾಗದೇ ಇಂದು ಪಾಳು ಬಿದ್ದಿದೆ.

ADVERTISEMENT

ಮದ್ಯ ವ್ಯಸನಿಗಳು ನಿತ್ಯ ಕುಡಿದು ಬಾಟಲಿಗಳನ್ನು ಕಟ್ಟಡದ ಒಳಗೆ ಬಿಸಾಡುತ್ತಿದ್ದಾರೆ. ಕಟ್ಟಡ ಗ್ರಾಮದಿಂದ ಒಂದು ಕಿ.ಮೀ. ದೂರ ಇರುವುದರಿಂದ ಸಂಜೆಯಾದ ತಕ್ಷಣ ಯಾವ ಚಟುವಟಿಕೆ ನಡೆದರೂ ಗ್ರಾಮಸ್ಥರ ಗಮನಕ್ಕೆ ಬರುವುದಿಲ್ಲ. ಈಚೆಗೆ ಪಕ್ಕದ ಆಂಧ್ರಪ್ರದೇಶದ ಮದ್ದನಕುಂಟೆ ಗ್ರಾಮದ ವ್ಯಕ್ತಿಯೊಬ್ಬರು ಈ ಕಟ್ಟಡದ ಒಳಗೆ ನೇಣಿಗೆ ಶರಣಾಗಿದ್ದರು.

‘ಈ ಕಟ್ಟಡವನ್ನು ನೆಲಸಮ ಮಾಡುವುದೇ ಒಳಿತು. ಈಗಾಗಲೇ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ದಾರಿ ಹೋಕರಿಗೆ ಭಯ ಹುಟ್ಟಿಸುತ್ತಿದೆ’ ಎಂದು ಪಿ.ಡಿ. ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದ್ರಾಮಣ್ಣ ಒತ್ತಾಯಿಸಿದ್ದಾರೆ.

‘ಪಕ್ಕದ ಆಂಧ್ರಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧವಾಗಿರುವುದರಿಂದ ಅಲ್ಲಿಯ ಮದ್ಯವ್ಯಸನಿಗಳು ಇತ್ತ ಬರುತ್ತಿದ್ದಾರೆ. ಇದರಿಂದ ಗಡಿ ಭಾಗದ ಮದ್ದಿಹಳ್ಳಿ, ಖಂಡೇನಹಳ್ಳಿ, ಲಕ್ಕನಹಳ್ಳಿ, ಹೊಸಕೆರೆ ಗ್ರಾಮಗಳ ಜಮೀನುಗಳಲ್ಲಿ ಡಾಬಾಗಳು ತಲೆ ಎತ್ತಿವೆ. ಅವು ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗಳಾಗಿ ಮಾರ್ಪಾಡಾಗಿವೆ. ಇಲ್ಲಿ ಬರುವವರು ಈ ಪಾಳು ಕಟ್ಟಡಕ್ಕೆ ಬಂದು ಕುಳಿತುಕೊಳ್ಳುತ್ತಿದ್ದಾರೆ’ ಎಂದು ಮದ್ದಿಹಳ್ಳಿ ಎಂ.ಬಿ. ಹನುಮಂತರಾಯ ಆರೋಪಿಸಿದ್ದಾರೆ. ಈ ಡಾಬಾಗಳನ್ನು ಮುಚ್ಚಿಸಬೇಕು ಎಂದೂ ಆರೋಪಿಸಿದ್ದಾರೆ.

..........

ಪಾಳು ಕಟ್ಟಡವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರೆ ಗಡಿ ಭಾಗದಲ್ಲಿ ನಮ್ಮ ಇಲಾಖೆಯ ಸಿಬ್ಬಂದಿ ಉಳಿದುಕೊಳ್ಳಲು ಮತ್ತು ಗಸ್ತು ತಿರುಗುವ ಸಂದರ್ಭದಲ್ಲಿ ಅನುಕೂಲವಾಗುತ್ತದೆ.

-ರಾಘವೇಂದ್ರ, ಸಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.