ಚಿತ್ರದುರ್ಗ: ಕಂದಾಯ ಸಚಿವ ಆರ್.ಅಶೋಕ್ ಅವರು ಜೂನ್ ತಿಂಗಳ ಗ್ರಾಮ ವಾಸ್ತವ್ಯವನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಮಾಡಲಿದ್ದಾರೆ. ಚಳ್ಳಕೆರೆ ಅಥವಾ ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಆರಂಭಿಸಿದ ನೂತನ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಚುನಾಯಿತ ಜನಪ್ರತಿನಿಧಿಗಳ ತರಬೇತಿ ಕಾರ್ಯಕ್ರಮ ಅಂತ್ಯೋದಯ ಯಶಸ್ವಿಯಾಗಿದೆ. ಇದನ್ನು ಗಮನಿಸಿ ಕಂದಾಯ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಲಾಗಿದೆ. ಇದಕ್ಕೆ ಸಚಿವರು ಒಪ್ಪಿಗೆ ನೀಡಿದ್ದಾರೆ. ವಾಸ್ತವ್ಯ ಹೂಡಲಿರುವ ಹಳ್ಳಿಯನ್ನು ಗುರುತಿಸಲಾಗುವುದು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಹೆಚ್ಚಾಗಿದೆ. ಈ ಎರಡೂ ಸಮುದಾಯಗಳಿಗೆ ಭೂಮಿ ಹಂಚಿಕೆ ಮಾಡುವ ಪೈಲಟ್ ಯೋಜನೆಗೆ ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡಲಿದೆ’ ಎಂದರು.
‘ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕಾರ್ಯಾಲಯವನ್ನು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ತೆರೆಯಲಾಗಿದೆ. ತರಬೇತಿ ಕಾರ್ಯಗಾರ, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಕೆಲಸ ಮಾಡಲಾಗುವುದು. ದಿನದ 24 ಗಂಟೆ ಕಚೇರಿ ಕಾರ್ಯನಿರ್ವಹಿಸಲು ಸಹಾಯವಾಣಿ ಆರಂಭಿಸಲಾಗುವುದು. ದಾವಣಗೆರೆ ಹಾಗೂ ಬೆಂಗಳೂರಿನಲ್ಲಿಯೂ ಪ್ರತ್ಯೇಕ ಕಾರ್ಯಾಲಯಗಳಿವೆ’ ಎಂದು ಹೇಳಿದರು.
* ಕ್ರೀಡೆಗೆ ಸಂಬಂಧಿಸಿದ ಸಂಘ–ಸಂಸ್ಥೆಗಳ ಸಭೆ ಕರೆಯುವ ಆಲೋಚನೆ ಇದೆ. ಖೇಲೊ ಇಂಡಿಯಾದ ಮುಂದುವರಿದ ಭಾಗವಾಗಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ.
-ಕೆ.ಎಸ್.ನವೀನ್,ವಿಧಾನಪರಿಷತ್ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.