ಮೊಳಕಾಲ್ಮುರು: ಕಾಯಂ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಗ್ರಾಮಸ್ಥರು ಮಂಗಳವಾರ ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಆಸ್ಪತ್ರೆ ಆರಂಭವಾದಾಗಿನಿಂದಲೂ ಕಾಯಂ ವೈದ್ಯರ ನೇಮಕ ಮಾಡಿಲ್ಲ, ಬರುವ ವೈದ್ಯರು ಒಂದೆರೆಡು ತಿಂಗಳು ಕೆಲಸ ಮಾಡಿ ವರ್ಗಾವಣೆ, ನಿಯೋಜನೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಈಗ ಸ್ಟಾಫ್ ನರ್ಸ್ ಹುದ್ದೆ ಸಹ ಖಾಲಿಯಾಗಿದೆ. ಪರಿಣಾಮ ಪ್ರಥಮ ಚಿಕಿತ್ಸೆ ಸಿಗುವುದು ದುಸ್ತರವಾಗಿದೆ. ಇಂತಹ ಪ್ರಯೋಜನಕ್ಕೆ ಆಸ್ಪತ್ರೆ ಯಾಕೆ ಇರಬೇಕು ? ಎಂದು ಪ್ರತಿಭಟನಾಕಾರರು ದೂರಿದರು.
ಗ್ರಾಮವು ಬಳ್ಳಾರಿ ಜಿಲ್ಲೆಯ ಕೂಡ್ಲೀಗಿ ಗಡಿಭಾಗದಲ್ಲಿದೆ, ಸಾರಿಗೆ ವ್ಯವಸ್ಥೆಯೂ ವಿರಳವಾಗಿದೆ. ಏನಾದರೂ ಅನಾರೋಗ್ಯ ಎದುರಾದಲ್ಲಿ ತುರ್ತು ಚಿಕಿತ್ಸೆಗೆ ಚಿತ್ರದುರ್ಗ, ಚಳ್ಳಕೆರೆ ಆಸ್ಪತ್ರೆಗಳಿಗೆ ಹೋಗಬೇಕಿದೆ. ಸಿಬ್ಬಂದಿ ಸಮಸ್ಯೆ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಯಂ ಸಿಬ್ಬಂದಿ ನೇಮಕ ತನಕ ಆಸ್ಪತ್ರೆ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಎಂ.ಬಿ. ಸಿದ್ದೇಶ್ವರ, ಯಜಮಾನ್ ದಾಸಪ್ಪ, ಒ. ಕರಿಬಸಪ್ಪ, ದಳಪತಿ ಸೂರಯ್ಯ, ನಾಗಭೂಷಣ, ಚನ್ನಬಸಮ್ಮ, ಕೊಲ್ಲಪ್ಪ, ಮೇಘರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.