ADVERTISEMENT

ಕೌಶಲ ವೃದ್ಧಿಸುವ ಹೊಸ ಶಿಕ್ಷಣ ನೀತಿ: ಪ್ರೊ.ಶರಣಪ್ಪ ಸಲಹೆ

ದಾವಣಗೆರೆ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:30 IST
Last Updated 26 ಜನವರಿ 2022, 3:30 IST
ಚಿತ್ರದುರ್ಗ ನಗರದ ಚಂದ್ರವಳ್ಳಿಯ ಎಸ್‌ಜೆಎಂ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಸ್ನಾತಕ ಪದವಿ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಶಿವಕುಮಾರ ಕಣಸೋಗಿ, ಶಿವಮೂರ್ತಿ ಮುರುಘಾ ಶರಣರು, ಡಾ.ಕೆ.ಸಿ. ರಮೇಶ್, ಡಾ.ಕೆ.ಮಲ್ಲಿಕಾರ್ಜುನ, ಎಚ್.ಕೆ.ಶಿವಪ್ಪ ಇದ್ದಾರೆ.
ಚಿತ್ರದುರ್ಗ ನಗರದ ಚಂದ್ರವಳ್ಳಿಯ ಎಸ್‌ಜೆಎಂ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಸ್ನಾತಕ ಪದವಿ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಶಿವಕುಮಾರ ಕಣಸೋಗಿ, ಶಿವಮೂರ್ತಿ ಮುರುಘಾ ಶರಣರು, ಡಾ.ಕೆ.ಸಿ. ರಮೇಶ್, ಡಾ.ಕೆ.ಮಲ್ಲಿಕಾರ್ಜುನ, ಎಚ್.ಕೆ.ಶಿವಪ್ಪ ಇದ್ದಾರೆ.   

ಚಿತ್ರದುರ್ಗ:ಹೊಸ ಶಿಕ್ಷಣ ನೀತಿಯು ಜಾಗತಿಕ ವಿದ್ಯಮಾನಗಳಿಗೆ ಅನುಗುಣವಾಗಿ ರಚಿತವಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಕೌಶಲ್ಯಗಳನ್ನೂ ವೃದ್ಧಿಸುವ ಆಶಯವನ್ನು ಹೊಂದಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ತಿಳಿಸಿದರು.

ಇಲ್ಲಿನ ಚಂದ್ರವಳ್ಳಿಯ ಎಸ್.ಜೆ.ಎಂ. ಕಾಲೇಜಿನಲ್ಲಿ ಮಂಗಳವಾರ ದಾವಣಗೆರೆ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಆಯೋಜಿಸಿದ್ದ ಸ್ನಾತಕ ಪದವಿ ಕನ್ನಡ ಭಾಷಾ ಪಠ್ಯಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೌಲ್ಯಾಧಾರಿತ ಜೀವನ ನಡೆಸಲು ಅಗತ್ಯವಾದ ಅಂಶಗಳ ಹಿನ್ನೆಲೆಯಲ್ಲಿ ಪಠ್ಯಪುಸ್ತಕಗಳನ್ನು ರಚಿಸಲಾಗಿದೆ. ಕನ್ನಡ ಭಾಷಾ ಪುಸ್ತಕಗಳು, ಸಮಕಾಲೀನ ಸವಾಲುಗಳನ್ನು ಎದುರಿಸುವ ಹಾಗೂ ಸದೃಢ ವ್ಯಕ್ತಿತ್ವಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಲಿ’ ಎಂದು ಆಶಿಸಿದರು.

ADVERTISEMENT

ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡವು ಕೇವಲ ಭಾಷೆ ಮಾತ್ರವಲ್ಲ. ಅದು ಕನ್ನಡಿಗರ ವಿವೇಕ, ಸಂಸ್ಕೃತಿ ಹಾಗೂ ಜೀವನ ವಿಧಾನವಾಗಿದೆ. ಇಂತಹ ಭಾಷೆ ಮತ್ತು ಸಾಹಿತ್ಯ ಕೇವಲ ಸಾಹಿತ್ಯಾಸಕ್ತರಿಗೆ ಮಾತ್ರ ಸೀಮಿತವಾಗದೆ ಅದು ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಕೇಂದ್ರಿತವಾದ ಶಿಕ್ಷಣವನ್ನು ಕಲಿಯುವ ಜೊತೆಗೆ ಎಲ್ಲರ ಬದುಕನ್ನು ಕಟ್ಟಿಕೊಡುವ ಅಗತ್ಯ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬರಬೇಕಿದೆ. ಕನ್ನಡಕ್ಕೆ ತನ್ನದೇ ಆದ ಕೌಶಲ ಮತ್ತು ನೈಪುಣ್ಯ ಇದ್ದು, ಕಲಿಕೆಯ ಮೂಲಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಹಾಗೂ ನೈತಿಕ ತಳಹದಿಯ ಶಿಕ್ಷಣದ ಮೂಲಕ ಅಂತಹ ಅವಕಾಶಗಳು ರೂಪಿಸುವುದು ಇಂದಿನ ಅಗತ್ಯವಾಗಿದೆ’ ಎಂದು ತಿಳಿಸಿದರು.

ಪ್ರಧಾನ ಸಂಪಾದಕ ಡಾ.ಕೆ. ಮಲ್ಲಿಕಾರ್ಜುನ, ಪ್ರಾಂಶುಪಾಲ ಡಾ.ಕೆ.ಸಿ. ರಮೇಶ್, ಉಪ ಪ್ರಾಂಶುಪಾಲ ಪ್ರೊ.ಎಚ್.ಕೆ.ಶಿವಪ್ಪ, ಐಕ್ಯೂಎಸಿ ಸಂಯೋಜಕ ಡಾ.ಆರ್.ವಿ. ಹೆಗಡಾಳ್, ಕನ್ನಡ ವಿಭಾಗದ ಡಾ.ಬಿ. ರೇವಣ್ಣ , ವಿ.ಇ. ಮಧು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.