ADVERTISEMENT

ಎಸಿಬಿ ಬಲೆಗೆ ಅಬಕಾರಿ ಡಿವೈಎಸ್‌ಪಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:45 IST
Last Updated 4 ಡಿಸೆಂಬರ್ 2021, 3:45 IST
ಶಿವಹರಳಯ್ಯ
ಶಿವಹರಳಯ್ಯ   

ಚಿತ್ರದುರ್ಗ: ಬಾರ್‌ ಆ್ಯಂಡ್‌ ರೆಸ್ಟೋರಂಟ್‌ ಮಾಲೀಕರಿಂದ ₹ 15 ಸಾವಿರ ಲಂಚ ಪಡೆಯುತ್ತಿದ್ದ ಅಬಕಾರಿ ಡಿವೈಎಸ್‌ಪಿ ಶಿವಹರಳಯ್ಯ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲಂಚದ ರೂಪದಲ್ಲಿ ಪಡೆದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಿವಹರಳಯ್ಯ ಅವರನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣದ ಎಚ್‌.ಡಿ.ಎನ್‌. ರಾಜು ಎಂಬುವರು ಅಬಕಾರಿ ಡಿವೈಎಸ್‌ಪಿ ವಿರುದ್ಧ ಎಸಿಬಿಗೆ ದೂರು ನೀಡಿದ್ದರು.

ರಾಜು ಅವರು ಹೊಳಲ್ಕೆರೆ ತಾಲ್ಲೂಕಿನ ಬಂಜಗೊಂಡನಹಳ್ಳಿಯಲ್ಲಿ ಲಕ್ಷ್ಮೀನರಸಿಂಹ ಬಾರ್‌ ಆ್ಯಂಡ್‌ ರೆಸ್ಟೋರಂಟ್‌ ನಡೆಸುತ್ತಿದ್ದಾರೆ. ಶಿವಹರಳಯ್ಯ ತಪಾಸಣೆಯ ನೆಪದಲ್ಲಿ ಇಲ್ಲಿಗೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಲೆಕ್ಕಪುಸ್ತಕ ಹಾಗೂ ದಾಸ್ತಾನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೆಂದು ಪರವಾನಗಿ ರದ್ದುಪಡಿಸುವ ಬೆದರಿಕೆ ಹಾಕುತ್ತಿದ್ದರು ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಡಿ.2ರಂದು ಬಾರ್‌ ಮಾಲೀಕರಿಗೆ ಶಿವಹರಳಯ್ಯ ₹ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಡಿವೈಎಸ್‌ಪಿ ಬಸವರಾಜ್ ಆರ್.ಮಗದುಮ್ ನೇತೃತ್ವದ ತಂಡ ಶಿವಹರಳಯ್ಯ ಅವರನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.