
ಸಂತೋಷ್ ಲಾಡ್
ಚಿತ್ರದುರ್ಗ: ‘ವಿದೇಶಗಳಿಗೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಬಗ್ಗೆ ಭಾಷಣ ಮಾಡುತ್ತಾರೆ, ಚರಕ ಹಿಡಿದು ಪೋಸು ಕೊಡುತ್ತಾರೆ. ಆದರೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟಿದ್ದಾರೆ. ಬಿಜೆಪಿಗೆ ಗಾಂಧೀಜಿ ಬೇಕಾಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೆನಡಾ, ಸಿಂಗಾಪುರ, ಇಂಗ್ಲೆಂಡ್ ದೇಶಗಳು ತಮ್ಮ ದೇಶಗಳ ನಾಗರಿಕರಿಗೆ ಭಾರತ, ದೆಹಲಿಗೆ ಹೋಗದಂತೆ ಎಚ್ಚರಿಕೆ ನೀಡುತ್ತಿವೆ. ಇಂತಹ ಪರಿಸ್ಥಿತಿ ಏಕೆ ಬಂದಿದೆ ಎಂಬ ಬಗ್ಗೆ ಪ್ರಧಾನಿ ಮಾತನಾಡುತ್ತಿಲ್ಲ. ಆದರೆ, ವಂದೇ ಮಾತರಂ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾತ್ಮ ಗಾಂಧಿ ಅವರನ್ನು ಬಿಜೆಪಿ ಯಾವತ್ತೂ ಒಪ್ಪಿಲ್ಲ’ ಎಂದರು.
‘ಬರೀ ಪೋಸು ಕೊಡುವುದಕ್ಕೆ ಮಾತ್ರ ಬಿಜೆಪಿ ಮುಖಂಡರಿಗೆ ಚರಕ ಬೇಕಾಗಿದೆ. ಮಹತ್ಮಾ ಗಾಂಧಿಗೆ ಅವರು ಎಂದಿಗೂ ಮಹತ್ವ ನೀಡಿಲ್ಲ. ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಯುಪಿಎ ಅವಧಿಯಲ್ಲಿ ಮಹತ್ವದ ಕಾರ್ಯಕ್ರಮಗಳು ಜಾರಿಯಾಗಿವೆ. ಎನ್ಡಿಎಯಿಂದ ಯಾವುದೇ ಕಾರ್ಯಕ್ರಮವೂ ಜಾರಿಯಾಗಿಲ್ಲ. ಯುಪಿಎ ಯೋಜನೆಗಳ ಹೆಸರು ಬದಲಾವಣೆ ಮಾಡುವುದೇ ಬಿಜೆಪಿಯ ಸಾಧನೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.