ಚಿತ್ರದುರ್ಗ: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯೂ ಗುರುವಾರ ಬೆಳಿಗ್ಗೆ 11ಕ್ಕೆ ಆರಂಭವಾಗಬೇಕಿತ್ತು. 11.30 ಆದರೂ ಅನೇಕ ಸದಸ್ಯರು ಸಭೆಗೆ ಹಾಜರಾಗಲೇ ಇಲ್ಲ. ಅಧಿಕಾರಿಗಳು ಮಾತ್ರ ಸದಸ್ಯರು ಬರುತ್ತಾರೆ ಎಂದು ಕೂತಲೇ ಕಾಯುತ್ತಾ ಕುಳಿತಿದ್ದರು.
ಸಭೆ ನಡೆಸಲು ಸದಸ್ಯರ ಸಂಖ್ಯಾಬಲ 15 ಇರಬೇಕು. ಆದರೆ, ಕೇವಲ ಎಂಟತ್ತು ಮಂದಿ ಮಾತ್ರ ಹಾಜರಾಗಿದ್ದರು. ಸದಸ್ಯರ ಸಂಖ್ಯೆ ಕಡಿಮೆ ಇದ್ದ ಕಾರಣದಿಂದಾಗಿ ಸಭೆ ಮುಂದೂಡಲಾಯಿತು.
ತಾಲ್ಲೂಕಿನ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಸದಸ್ಯರು ಗೈರಾಗಿದ್ದರಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಬೇಸರದಿಂದ ಕುಳಿತಿದ್ದರು.
ತಾಲ್ಲೂಕು ಪಂಚಾಯಿತಿ ಇಒ ಕೃಷ್ಣನಾಯ್ಕ್, ‘ಅನಾರೋಗ್ಯ, ಚಿಕಿತ್ಸೆ, ಮದುವೆ ಸೇರಿ ಇತರೆ ಕಾರಣಗಳಿಂದಾಗಿ ಸದಸ್ಯರು ಸಭೆಗೆ ಗೈರಾಗಿದ್ದಾರೆ. ಆದ್ದರಿಂದ ಸಭೆ ಮುಂದೂಡಲಾಗಿದೆ’ ಎಂದು ಸಬೂಬು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.