ADVERTISEMENT

ಬಾಕಿ ಸಂಬಳ ಬಿಡುಗಡೆಗೆ ಲಂಚ: ADLR, ಸರ್ವೇಯರ್‌, ಸರ್ವೆ ಸೂಪರ್‌ವೈಸರ್ ಬಂಧನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 15:42 IST
Last Updated 27 ನವೆಂಬರ್ 2025, 15:42 IST
<div class="paragraphs"><p>ರಾಜು ಬಿ.ಕೆ,&nbsp;ಧನಶೇಖರ,&nbsp;ಕೃಷ್ಣಮೂರ್ತಿ</p></div>

ರಾಜು ಬಿ.ಕೆ, ಧನಶೇಖರ, ಕೃಷ್ಣಮೂರ್ತಿ

   

ಮಂಗಳೂರು: ಹೊರಗುತ್ತಿಗೆ ನೌಕರರೊಬ್ಬರ ಸಂಬಳದ ಬಾಕಿ ಬಿಲ್ ಪಾವತಿಗೆ ಮತ್ತು ಅವರನ್ನು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸುವ ನೇಮಕಾತಿ ಆದೇಶ ಮಾಡಿಕೊಡಲು ಲಂಚ ಪಡೆದ ಆರೋಪದ ಮೇಲೆ ಮಂಗಳೂರು ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್‌) ಬಿ.ಕೆ.ರಾಜು, ಉಳ್ಳಾಲ ಕಚೇರಿಯ ಸರ್ವೇಯರ್‌ ಕೃಷ್ಣಮೂರ್ತಿ ಹಾಗೂ ಸರ್ವೆ ಸೂಪರ್‌ವೈಸರ್ ಎಸ್.ಧನಶೇಖರ ಎಂಬುವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಉಳ್ಳಾಲದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕೃಷ್ಣಮೂರ್ತಿ ₹50 ಸಾವಿರ, ಭೂದಾಖಲೆಗಳ ಸಹಾಯಕ ನಿರ್ದೇಶಕ ಬಿ.ಕೆ. ರಾಜು ಅವರು ₹10 ಸಾವಿರ ಹಾಗೂ ಸರ್ವೆ ಸೂಪರ್‌ವೈಸರ್ ಎಸ್.ಧನಶೇಖರ ₹10 ಸಾವಿರ ಲಂಚ ಕೇಳಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಭೂದಾಖಲೆ ಇಲಾಖೆಯ ನಗರ ಆಸ್ತಿ ಮಾಲೀಕತ್ವದ ದಾಖಲೆ (ಯು.ಪಿ.ಒ.ಆರ್‌) ವಿಭಾಗದ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ವ್ಯಕ್ತಿಯೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

‘ದೂರುದಾರ ವ್ಯಕ್ತಿಯಿಂದ ಕೃಷ್ಣಮೂರ್ತಿ ₹20 ಸಾವಿರ, ಬಿ.ಕೆ. ರಾಜು ₹ 5 ಸಾವಿರ, ಎಸ್.ಧನಶೇಖರ ₹ 5 ಸಾವಿರ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ವಿಭಾಗ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿಗಳಾದ ಗಾನ ಪಿ.ಕುಮಾರ್, ಸುರೇಶ್ ಕುಮಾರ್.ಪಿ, ಇನ್‌ಸ್ಪೆಕ್ಟರ್‌ಗಳಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ರವಿ ಪವಾರ್, ರಾಜೇಂದ್ರ ನಾಯ್ಡ್ ಎಂ.ಎನ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.