ADVERTISEMENT

ನಾಯಕರಿಗೆ ಕಂಬಳ, ಹುಲಿ ಕುಣಿತದ್ದೇ ಚಿಂತೆ; ಸಿಪಿಎಂ ನೇತೃತ್ವದ ಪ್ರತಿಭಟನೆ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:51 IST
Last Updated 9 ಡಿಸೆಂಬರ್ 2025, 4:51 IST
ಮಂಗಳೂರಿನ ಗಡಿಯಾರ ಗೋಪುರದ ಬಳಿ ಸೋಮವಾರ ಸಿಪಿಎಂ ನೇತೃತ್ವದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು
ಮಂಗಳೂರಿನ ಗಡಿಯಾರ ಗೋಪುರದ ಬಳಿ ಸೋಮವಾರ ಸಿಪಿಎಂ ನೇತೃತ್ವದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು   

ಮಂಗಳೂರು: ‘ಜಿಲ್ಲೆಯ ಜನರನ್ನು ಕಾಡುತ್ತಿರುವ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ  ಮುಂತಾದ ಸಮಸ್ಯೆ ಬಗೆಹರಿಸಬೇಕಾದ ಬಿಜೆಪಿಯ ಶಾಸಕರು ಕಂಬಳ, ಹುಲಿ ಕುಣಿತ, ದೋಸೆ ಹಬ್ಬ, ಆಹಾರ ಮೇಳದಂತಹ ಆಡಂಬರದ ಉತ್ಸವ ಆಯೋಜನೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಗಳೂ ಕಂಬಳ, ಹುಲಿಕುಣಿತ ಆಯೋಜನೆಗೆ ಬಿಜೆಪಿ ಜೊತೆಗೆ ಜಿದ್ದಿಗೆ ಬಿದ್ದಿದ್ದಾರೆ’ ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ‌ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು. 

ಜಿಲ್ಲೆಯ ಜನರ ಬದುಕನ್ನು ಹಸನುಗೊಳಿಸಲು ಅಗತ್ಯವಾಗಿ ಈಡೇರಲೇಬೇಕಾದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಿಪಿಎಂ ವತಿಯಿಂದ ಇಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ಖಾಸಗಿ ವೈದ್ಯಕೀಯ ಕಾಲೇಜುಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಲಾಬಿಗಳು ಜಿಲ್ಲೆಯ ರಾಜಕಾರಣದ ಮೇಲೆ ಪೂರ್ತಿ ಹಿಡಿತ ಸಾಧಿಸಿವೆ. ಜನಪ್ರತಿನಿಧಿಗಳು ಇವುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಖಾಸಗೀಕರಣದಿಂದ ಬಡ ಜನರು ಆರೋಗ್ಯ, ಶಿಕ್ಷಣ ಸೇವೆಯಿಂದ ವಂಚಿತರಾಗಬೇಕಾದ ದುಃಸ್ಥಿತಿ ಎದುರಾಗಿದೆ. ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಕಿದ್ವಾಯಿ, ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕಗಳು ಜಿಲ್ಲೆಯ ಪಾಲಿಗೆ ಈಗಲೂ ಮರೀಚಿಕೆ. ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ  ಅನೇಕ ಸರ್ಕಾರಿ ಆಸ್ಪತ್ರೆಗಳು ಖಾಸಗಿ ವೈದ್ಯಕೀಯ ಕಾಲೇಜುಗಳ ಪಾಲಾಗಿವೆ’ ಎಂದರು. 

ADVERTISEMENT

ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ಜಿಲ್ಲೆಯಲ್ಲಿ ವಸತಿರಹಿತರಿಗೆ ಮನೆ ನಿವೇಶನ ಹಸ್ತಾಂತರಿಸದೇ 2 ದಶಕ ದಾಟಿದೆ.  ಪಾಲಿಕೆ ವ್ಯಾಪ್ತಿಯಲ್ಲಿ ಮನೆರಹಿತ ಬಡವರಿಗೆ ಹಕ್ಕುಪತ್ರ ನೀಡಿ 8 ವರ್ಷಗಳಾದ ಬಳಿಕವೂ ಆ ವಸತಿ ಯೋಜನೆ ಆರಂಭವಾಗಿಲ್ಲ. ನಗರವು ರಿಯಲ್ ಎಸ್ಟೇಟ್, ಟಿಡಿಆರ್ ದಂಧೆಕೋರರ ಸ್ವರ್ಗವಾಗಿ ಮಾರ್ಪಟ್ಟಿದೆ.  ಮೀನುಗಾರಿಕಾ ದಕ್ಕೆಯಂತೂ ಗಬ್ಬು‌ ನಾರುತ್ತಿದೆ, ಇಲ್ಲಿ ಮೀನುಗಾರರು, ವ್ಯಾಪಾರಿಗಳು, ಕಾರ್ಮಿಕರನ್ನು ಆಳುವ ಸರ್ಕಾರಗಳು ನಿಕೃಷ್ಟವಾಗಿ ಕಾಣುತ್ತಿವೆ. ಮೀನುಗಾರರ ಸಮಸ್ಯೆಗಳನ್ನು ಕೇಳುವವರೇ ಇಲ್ಲ’ ಎಂದರು. 

ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯ  ಕೃಷ್ಣಪ್ಪ ಕೊಂಚಾಡಿ, ‘ಜಿಲ್ಲೆಯ ಜನಸಂಖ್ಯೆಯಲ್ಲಿ ಆದಿವಾಸಿಗಳು, ಅರಣ್ಯವಾಸಿಗಳು, ದಲಿತರು, ಅಲೆಮಾರಿ ಸಮುದಾಯಗಳ ಪ್ರಮಾಣ ಶೇ 16ರಷ್ಟಿದೆ. ಇವರನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಪೂರ್ತಿ ಕಡೆಗಣಿಸಿದ್ದಾರೆ. ಅಭಿವೃದ್ದಿ ಯೋಜನೆಗಳಲ್ಲಿ ಈ ಸಮುದಾಯಗಳಿಗೆ ಜಾಗವೇ ಇಲ್ಲ’ ಎಂದು ಹೇಳಿದರು.

ಸಿಪಿಎಂ ಮುಖಂಡರಾದ ಬಿ.ಎಂ.ಭಟ್, ವಸಂತ ಆಚಾರಿ, ಜಯಂತಿ ಶೆಟ್ಟಿ, ಸುಕುಮಾರ್, ಸದಾಶಿವ ದಾಸ್ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.‌

ಕಿಲೋಮೀಟರ್ ಉದ್ದಕ್ಕೂ ಕೆಂಬಾವುಟಗಳ ಸಾಲು

ಆರೋಗ್ಯ ಉದ್ಯೋಗ ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ  ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದವರೆಗೆ ಬೃಹತ್ ಜಾಥಾ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಿಪಿಎಂ ಕಾರ್ಯಕರ್ತರು ಕೆಂಬಾವುಟವನ್ನು ಕೈಯಲ್ಲಿ ಹಿಡಿದು ಹೆಜ್ಜೆಹಾಕಿದರು.  'ಜನ ಸಾಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ ಧ್ಯೇಯವಾಕ್ಯದಲ್ಲಿ ನಡೆದ ಈ ಜಾಥಾದ ಉದ್ದಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.  ಅಭಿವೃದ್ದಿಯ ಫಲ ಜನಸಾಮಾನ್ಯರಿಗೂ ತಲುಪುವಂತೆ ಯೋಜನೆಗಳನ್ನು ರೂಪಿಸಬೇಕು. ಬಡವರಿಗೂ ವಸತಿ ಸಿಗಗೇಕು ಖಾಸಗಿ ಆಸ್ಪತ್ರೆಗಳ ಲೂಟಿಗೆ ಕಡಿವಾಣ ಹಾಕಬೇಕು ಶಿಕ್ಷಣ ಸಂಸ್ಥೆಗಳ ಲಾಬಿಯನ್ನು ಮಟ್ಟ ಹಾಕಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.