ಪುತ್ತೂರು: ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಯಾವುದೇ ಬಹುಮಾನ ಸಿಕ್ಕಿಲ್ಲ ಎಂದು ಮನನೊಂದು ಕೀಟನಾಶಕ ಸೇವಿಸಿದ್ದ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಕ್ರೀಡಾಪಟು, ವಿದ್ಯಾರ್ಥಿನಿ ಶನಿವಾರ ಮೃತಪಟ್ಟಿದ್ದಾರೆ.
ಕುರಿಯ ಗ್ರಾಮದ ಸಂಪ್ಯ ನಿವಾಸಿ ಮಂಜಪ್ಪ ಗೌಡ ಅವರ ಪುತ್ರಿ, ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿ ನಿಶಾ ಬಿ.ಎಂ (17) ಮೃತಪಟ್ಟವರು.
ಓಟಗಾರ್ತಿಯಾಗಿದ್ದ ನಿಶಾ ಅವರು ಕೆಲ ದಿನಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ನಲ್ಲಿ ಯಾವುದೇ ಬಹುಮಾನ ಸಿಕ್ಕಿರಲಿಲ್ಲ. ಕ್ರೀಡಾಕೂಟ ಮುಗಿಸಿಕೊಂಡು ಹಿಂತಿರುಗಿ ಬಂದಿದ್ದ ಅವರು ಬಹುಮಾನ ಸಿಕ್ಕಿಲ್ಲ ಎಂಬ ಬೇಸರದಲ್ಲಿದ್ದರು. ನ.14ರಂದು ವಾಂತಿ ಮಾಡುತ್ತಾ ಅಸ್ವಸ್ಥಗೊಂಡಿದ್ದ ಆಕೆಯನ್ನು ಮನೆಯವರು ವಿಚಾರಿಸಿದಾಗ ತೋಟಕ್ಕೆ ಸಿಂಪಡಿಸುವ ಕೀಟನಾಶಕ ಸೇವಿಸಿರುವುದಾಗಿ ತಿಳಿಸಿದ್ದರು.
ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚೇತರಿಸಿಕೊಳ್ಳದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ನಿಶಾ ಸಹೋದರ ನಿಶಾಂತ್ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.