ADVERTISEMENT

ಮಂಗಳೂರಿನಲ್ಲಿ ಶ್ರೀಲಂಕಾದ 38 ಪ್ರಜೆಗಳ ಅಕ್ರಮ ವಾಸ: ಎನ್‌ಐಎಯಿಂದ ತನಿಖೆ ಆರಂಭ

ಮಂಗಳೂರಿನಲ್ಲಿದ್ದ ಶ್ರೀಲಂಕಾದ 38 ಪ್ರಜೆಗಳು ಬೆಂಗಳೂರಿನ ಜೈಲಿಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:52 IST
Last Updated 6 ಆಗಸ್ಟ್ 2021, 3:52 IST
ಮಂಗಳೂರಿನಲ್ಲಿ ವಾಸವಾಗಿದ್ದ ಶ್ರೀಲಂಕಾದ 38 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು (ಸಂಗ್ರಹ ಚಿತ್ರ)
ಮಂಗಳೂರಿನಲ್ಲಿ ವಾಸವಾಗಿದ್ದ ಶ್ರೀಲಂಕಾದ 38 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು (ಸಂಗ್ರಹ ಚಿತ್ರ)   

ಮಂಗಳೂರು: ಅಧಿಕೃತ ದಾಖಲೆ ಇಲ್ಲದೆ ನಗರದಲ್ಲಿ ವಾಸ್ತವ್ಯವಿದ್ದ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.

ಕಳೆದ ತಿಂಗಳು ಮಂಗಳೂರಿನ ವಿವಿಧ ಕಡೆಗಳಲ್ಲಿ ಅಕ್ರಮ ವಾಸ್ತವ್ಯ ಹೊಂದಿದ್ದ ಆರೋಪದಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಈ ವೇಳೆ ಶ್ರೀಲಂಕಾ ಪ್ರಜೆಗಳು ಅಕ್ರಮವಾಗಿ ಗಡಿ ದಾಟಿ ತಮಿಳುನಾಡು ಮೂಲಕ ಕೆನಡಾಗೆ ತೆರಳುವ ಉದ್ದೇಶ ಹೊಂದಿರುವುದು ಬೆಳಕಿಗೆ ಬಂದಿತ್ತು. ತಮಿಳುನಾಡಿನಲ್ಲಿ ಚುನಾವಣೆಯ ಕಾರಣಕ್ಕೆ ಬಂದೋಬಸ್ತ್‌ ಹೆಚ್ಚಿದ್ದರಿಂದ ಮಂಗಳೂರಿಗೆ ಬಂದಿದ್ದರು.

ವಿಚಾರಣೆ ವೇಳೆ ಭಾರತಕ್ಕೆ ಅಕ್ರಮ ಪ್ರವೇಶ ಹಾಗೂ ಅಕ್ರಮ ವಾಸ್ತವ್ಯ ದೃಢಪಟ್ಟಿದ್ದು, ಈ ಬಗ್ಗೆ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಮಂಗಳೂರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ಶ್ರೀಲಂಕಾದ ನಿಷೇಧಿತ ಸಂಘಟನೆ ಎಲ್‌ಟಿಟಿಇ ಜೊತೆ ನಂಟಿನ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ನೀಡಲಾಗಿತ್ತು. ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ಬಂದು ತನಿಖೆ ಕೈಗೆತ್ತಿಕೊಂಡಿದ್ದರು.

ADVERTISEMENT

ಎನ್‌ಐಎ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲೇ ವಿದೇಶಿ ಪ್ರಜೆಗಳಿಗೆ ತಾತ್ಕಾಲಿಕ ಕಾರಾಗೃಹ ವ್ಯವಸ್ಥೆಗೆ ಪೊಲೀಸ್ ಕಮಿಷನರ್ ಅವರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದರು. ಸಮಾಜ ಕಲ್ಯಾಣ ಇಲಾಖೆ ತಾತ್ಕಾಲಿಕ ಬಂದೀಖಾನೆ ವ್ಯವಸ್ಥೆ ಮಾಡಲು ಮುಂದಾಗಿತ್ತು.

ಮಂಗಳೂರಿನಲ್ಲಿ ಬಂಧಿತ 38 ಮಂದಿ ಶ್ರೀಲಂಕಾ ಪ್ರಜೆಗಳ ಪೈಕಿ ಒಬ್ಬ, ಶ್ರೀಲಂಕಾದ ನಿಷೇಧಿತ ಸಂಘಟನೆ ಎಲ್‌ಟಿಟಿಇ ಜೊತೆ ನಂಟು ಹೊಂದಿ ರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಎಲ್‌ಟಿಟಿಇಗೆ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಬಂಧಿತ ವ್ಯಕ್ತಿಯೊಬ್ಬ ಇರುವುದು ಗೊತ್ತಾಗಿದೆ. ಈತನಿಗೆ ತಮಿಳುನಾಡಿನಲ್ಲಿ ಬಂಧಿತ ಎಲ್‌ಟಿಟಿಇ ಬೆಂಬಲಿಗ ದಿನಕರನ್ ಜೊತೆ ಸಂಪರ್ಕ ಇತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.