
ಸುಬ್ರಹ್ಮಣ್ಯ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಮಿತ್ರ ಪಕ್ಷಗಳೊಂದಿಗೆ ಸೇರಿ ಜನಪರ ಆಡಳಿತ ನಡೆಸುತ್ತಿದೆ. ನಮ್ಮ ಜೆಡಿಎಸ್ ಪಕ್ಷವೂ ಎನ್ಡಿಎ ಜತೆಗೆ ಮುಂದಿನ ಚುನಾವಣೆಯನ್ನೂ ಎದುರಿಸಲಿದೆ’ ಎಂದು ರಾಜ್ಯಸಭಾ ಸದಸ್ಯ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರದೊಂದಿಗೆ ಮಾತನಾಡಿದ ಅವರು, ಎನ್ಡಿಎ ಜತೆಗಿನ ನಮ್ಮ ಮೈತ್ರಿ ನಿರಾತಂಕವಾಗಿದೆ. ನರೇಂದ್ರ ಮೋದಿ ನಾಯಕನಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಇದೀಗ ಎನ್ಡಿಎ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವರಾಗಿದ್ದಾರೆ ಎಂದರು.
‘ಇಂದಿನ ಯುವ ಜನಾಂಗವು ಐಟಿ, ಬಿಟಿ ಎಂದು ಉದ್ಯೋಗ ಅರಸುತ್ತ ದೂರದ ನಗರಗಳಿಗೆ ಹಾಗೂ ಹೊರ ರಾಷ್ಟ್ರಗಳಿಗೆ ಹೋಗುವ ಬದಲು ತಮ್ಮ ಊರಿನಲ್ಲಿ ಕೃಷಿಯ ಬಗ್ಗೆ ಒಲವು ತೋರಿಸಿ ಕೃಷಿಯನ್ನು ಅಭಿವೃದ್ಧಿಪಡಿಸಿ ಹೆಚ್ಚು ಆದಾಯ ಪಡೆಯುವಂತಾಗಬೇಕು. ಈ ಸಂಬಂಧ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು. ಯುವಕರು ರಾಜಕೀಯದಲ್ಲೂ ತೊಡಗಿಕೊಂಡು ಸಮಾಜಮುಖಿ ಕೆಲಸ ಮಾಡಲು ಅವಕಾಶಗಳು ಇವೆ’ ಎಂದರು.
ಎಚ್.ಡಿ.ದೇವೇಗೌಡ ಅವರು ಭಾನುವಾರ ಕ್ಷೇತ್ರಕ್ಕೆ ಬಂದಿದ್ದು, ಸೋಮವಾರ ಬೆಳಿಗ್ಗೆ ಕ್ಷೇತ್ರದಲ್ಲಿ ಸಂಕಲ್ಪ ನೆರವೇರಿಸಿ, ಆಶ್ಲೇಷ ಸೇವೆ ನೇರವೇರಿಸಿದರು. ಬಳಿಕ ಅಕ್ಕಿ, ಬೆಲ್ಲ, ತೆಂಗಿನಕಾಯಿಯಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ಶ್ರೀದೇವರ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸುಳ್ಯ ಶಾಶಕಿ ಭಾಗೀರಥಿ ಮುರುಳ್ಯ, ಪ್ರಮುಖರಾದ ಎಸ್.ಎನ್.ಮನ್ಮಥ, ಎಂ.ಬಿ.ಸದಾಶಿವ, ಜಾಕೆ ಮಾಧವಗೌಡ, ಕೇನ್ಯ ರವೀಂಧ್ರ ಶೆಟ್ಟಿ, ಕುಂಟಿಕಾನ ಲಕ್ಷ್ಮಣ ಗೌಡ, ಅಕ್ಷಿತ್ ಸುವರ್ಣ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮೀತಿ ಅಧ್ಯಕ್ಷ ಹರೀಶ್ ಇಂಜಾಡಿ, ಇಒ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಪ್ರವೀಣ ರೈ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.