ಪ್ರಾತಿನಿಧಿಕ ಚಿತ್ರ
ಮಂಗಳೂರು: ಬಜಪೆ ಪೊಲೀಸ್ ಠಾಣೆಯ ವ್ಯಾಪ್ತಿಯ ಎಡಪದವಿನಲ್ಲಿ ಸೋಮವಾರ ಬೈಕಿನಲ್ಲಿ ಸಾಗುತ್ತಿದ್ದ ನಾಲ್ವರು ಯುವಕರ ಗುಂಪು ಚೂರಿ ಇರಿದು ಯುವಕನನ್ನು ಕೊಲ್ಲಲು ಯತ್ನಿಸಿದೆ. ಈ ಕೃತ್ಯದಲ್ಲಿ ಭಾಗಿಯಾದ ಒಬ್ಬ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಖಿಲೇಶ್ ಹಲ್ಲೆಗೊಳಗಾದ ಯುವಕ. ಒಂದೇ ಬೈಕಿನಲ್ಲಿ ನಾಲ್ವರು ಕುಳಿತುಕೊಂಡು, ಕೈಯಲ್ಲಿ ಚೂರಿ ಹಿಡಿದುಕೊಂಡು ಸಾಗುತ್ತಿದ್ದುದ್ದನ್ನು ಅಖಿಲೇಶ್ ನೋಡಿದ್ದರು. ಈ ಕುರಿತು ವಿಡಿಯೊ ಚಿತ್ರೀಕರಿಸಲು ಅವರನ್ನು ಹಿಂಬಾಲಿಸಿದ್ದರು. ಬೈಕಿನಲ್ಲಿ ಸಾಗುತ್ತಿದ್ದ ಕಿಡಿಗೇಡಿಗಳು ಅಖಿಲೇಶ್ ಅವರತ್ತ ಚೂರಿ ಬೀಸಿದ್ದು, ಅವರ ಕೈಗಳಿಗೆ ಗಾಯಗಳಾಗಿವೆ. ಆ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಈ ನಾಲ್ವರು ವ್ಯಕ್ತಿಗಳು, ಈ ಘಟನೆಗೂ ಮುನ್ನ ಬಾರ್ ಒಂದರಿಂದ ಹೊರಗೆ ಬರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅವರು ಪಾನಮತ್ತರಾಗಿದ್ದರೆ ಅಥವಾ ಬೇರಾವುದೇ ಅಮಲು ಪದಾರ್ಥ ಸೇವಿಸಿ, ಅದರ ಪ್ರಭಾವಕ್ಕೆ ಒಳಗಾಗಿದ್ದರೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಈ ಕೃತ್ಯದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೇ ತನಿಖೆ ನಡೆಸುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.