ADVERTISEMENT

ಎಸ್‍ಸಿಡಿಸಿಸಿ ಬ್ಯಾಂಕ್‌ಗೆ ₹33.65 ಕೋಟಿ ಲಾಭ: ರಾಜೇಂದ್ರಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 10:17 IST
Last Updated 3 ಏಪ್ರಿಲ್ 2021, 10:17 IST
ಎಸ್‍ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌ ಮಾತನಾಡಿದರು.
ಎಸ್‍ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌ ಮಾತನಾಡಿದರು.    

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ಈ ಬಾರಿ ದಾಖಲೆಯ ₹33.65 ಕೋಟಿ ಲಾಭವನ್ನು ಗಳಿಸಿದೆ. ಇದು ಎಸ್‍ಸಿಡಿಸಿಸಿ ಬ್ಯಾಂಕ್‍ನ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ. ಕೋವಿಡ್-19 ಸಂಕಷ್ಟದಲ್ಲಿಯೂ ಬ್ಯಾಂಕ್ ಬ್ಯಾಂಕಿಂಗ್ ಸೇವೆಯಲ್ಲಿ ಅಪೂರ್ವ ದಾಖಲೆ ನಿರ್ಮಾಣ ಮಾಡಿದೆ ಎಂದು ಎಸ್‍ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ. ಎನ್‌. ರಾಜೇಂದ್ರಕುಮಾರ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್‍ಸಿಡಿಸಿಸಿ ಬ್ಯಾಂಕ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆ ಹೊಂದಿದೆ. ವರ್ಷದಲ್ಲಿ ₹ 10,100.30 ಕೋಟಿ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ.19.30 ಏರಿಕೆ ಕಂಡಿದೆ. 2021-22ನೇ ಸಾಲಿಗೆ ₹ 11,000 ಕೋಟಿ ವ್ಯವಹಾರದ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಠೇವಣಿ ಇಲ್ಲದೆಯೂ ಬ್ಯಾಂಕ್ ತನ್ನ 105 ಶಾಖೆಗಳ ಮುಖಾಂತರ 2020-21ನೇ ಸಾಲಿನಲ್ಲಿ ಒಟ್ಟು ₹ 4948.34 ಕೋಟಿ ಠೇವಣಿ ಸಂಗ್ರಹಿಸಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳಿಗಿಂತ ಎಸ್‍ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಕ್ಕಿಂತ ಈ ಬಾರಿ ಶೇ.17.65 ಏರಿಕೆ ಕಂಡಿದೆ ಎಂದು ಅವರು ತಿಳಿಸಿದರು.

ADVERTISEMENT

ಬ್ಯಾಂಕ್ ₹3712.67 ಕೋಟಿ ಮುಂಗಡ ಹಣ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ₹ 1596.04 ಕೋಟಿ, ಮಧ್ಯಮಾವಧಿ ಸಾಲ ₹ 129.34 ಕೋಟಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು ₹ 1725.38 ಕೋಟಿ ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರ ಬಾಕಿ₹5151.96 ಕೋಟಿಯಷ್ಟು ಇದೆ ಎಂದು ಅವರು ತಿಳಿಸಿದರು.

ಎಸ್‍ಸಿಡಿಸಿಸಿ ಬ್ಯಾಂಕ್ ನೀಡಿದ ಎಲ್ಲ ಕೃಷಿ ಸಾಲಗಳು ಶೇ 100 ರಷ್ಟು ಮರು ಪಾವತಿ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಈ ಸಾಧನೆ 26 ವರ್ಷಗಳಿಂದ ಸತತವಾಗಿ ನಡೆಯುತ್ತಿದ್ದು, ಇದು ರಾಷ್ಟ್ರೀಯ ದಾಖಲೆ ಆಗಿದೆ ಎಂದು ಅವರು ತಿಳಿಸಿದರು.

ಬ್ಯಾಂಕ್‍ಗೆ ಒಟ್ಟು 1013 ಸಂಘಗಳು ಸದಸ್ಯತ್ವ ಹೊಂದಿದ್ದು, ಇವುಗಳ ಬಂಡವಾಳದ ಪಾಲು ₹ 263.43 ಕೋಟಿ ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇ 27.24 ಏರಿಕೆ ಕಂಡಿದೆ. ದುಡಿಯುವ ಬಂಡವಾಳ ₹ 7212.71 ಕೋಟಿಯಷ್ಟು ಇದೆ. ಇದು ಕಳೆದ ವರ್ಷಕ್ಕಿಂತ (₹6110.59 ಕೋಟಿ) ಶೇ 18.04 ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ ₹ 136.07 ಕೋಟಿ ವಿವಿಧ ನಿಧಿ ಹೊಂದಿದೆ ಎಂದು ಅವರು ತಿಳಿಸಿದರು.

‘ರುಪೇ’ ಕಿಸಾನ್ ಕ್ರೆಡಿಟ್ ಕಾರ್ಡ್
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಹೊಂದಿರುವ ರೈತರಿಗೆ ಬ್ಯಾಂಕ್ ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್‍ನ್ನು ನೀಡಲಾಗಿದೆ. ಈಗಾಗಲೇ 1,19228 ರುಪೇ ಕಿಸಾನ್ ಕಾರ್ಡ್‍ಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. 58,910 ರುಪೇ ಡೆಬಿಟ್ ಕಾರ್ಡ್‍ಗಳನ್ನು ಬ್ಯಾಂಕ್‍ನ ಇತರ ಗ್ರಾಹಕರಿಗೆ ನೀಡಲಾಗಿದೆ ಎಂದು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್‌ ರಾಜೇಂದ್ರಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.