ಬಂಟ್ವಾಳ: ಕಳೆದ 11 ವರ್ಷಗಳಿಂದ ಪ್ರಧಾನಿಯಾಗಿ ದೇಶಕ್ಕೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಗಾಣಿಗ ಸಮಾಜದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿ ಕೊಟ್ಟ ಹಾದಿ ಎಲ್ಲರಿಗೂ ಮಾದರಿಯಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮಾತನಾಡಿ, ‘ಆಧುನಿಕ ಯುಗದಲ್ಲಿ ಗಾಣಿಗ ಸಮುದಾಯವು ಕುಲಕಸುಬು ಯಾಂತ್ರಿಕರಣಗೊಳಿಸಿ ಹೊಸ ರೂಪ ನೀಡಲು ಮುಂದಾದರೆ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ಗಾಣಿಗರು ಯಾಂತ್ರಿಕ ಉದ್ದಿಮೆ ಆರಂಭಿಸಿದಾಗ ಉದ್ಯೋಗ ಸೃಷ್ಟಿಯಾಗುತ್ತದೆ’ ಎಂದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ವಿಭಾಗ ಮುಖ್ಯಸ್ಥ ದುರ್ಗಾಪ್ರಸಾದ್ ಉಪನ್ಯಾಸ ನೀಡಿದರು. ಬಾರ್ಕೂರು ಶ್ರೀ ವೇಣುಗೋಪಾಲ ದೇವಸ್ಥಾನ ಆಡಳಿತ ಮೊಕ್ತೇಸರ ಉದಯ ಕುಮಾರ್, ಮಂಗಳೂರು ಕರಾವಳಿ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ತೇಜಪಾಲ್, ಅಧ್ಯಕ್ಷ ಎ.ಎಸ್.ವೆಂಕಟೇಶ್, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಉದ್ಯಮಿ ಮಾಧವ ಎಸ್.ಮಾವೆ, ಉದ್ಯಮಿ ರಾಮಕೃಷ್ಣ ಬಾರ್ಕೂರು, ಜಿಲ್ಲಾ ಗಾಣಿಗ ಸಂಘದ ಉಪಾಧ್ಯಕ್ಷ ರಮೇಶ್ ಮೆಂಡನ್ ಮಾತನಾಡಿದರು.
ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ನಳಿನಿ ಪ್ರಸಾದ್, ಬರಿಮಾರು ಗ್ರಾ.ಪಂ.ಅಧ್ಯಕ್ಷ ಸದಾಶಿವ ಬರಿಮಾರು, ಕೆದಿಲ ಗ್ರಾ.ಪಂ.ಅಧ್ಯಕ್ಷ ಹರೀಶ್ ವಿ.ಪಾಲ್ತಾಜೆ, ಬಾಳ್ತಿಲ ಗ್ರಾ ಪಂ.ಉಪಾಧ್ಯಕ್ಷೆ ರಂಜಿನಿ, ಇಡ್ಕಿದು ಗ್ರಾ.ಪಂ.ಉಪಾಧ್ಯಕ್ಷ ಪದ್ಮನಾಭ ಇಡ್ಕಿದು, ಪ್ರಮುಖರಾದ ಅನಿಲ್ಕುಮಾರ್ ಅತ್ತಾವರ, ಎಂಜಿನಿಯರ್ ಸಂತೋಷ್ ಮಣಿಹಳ್ಳ,ವಿಕ್ರಮ್ ಗಾಣಿಗ ಸಜಿಪ, ನರ್ಸಪ್ಪ ಅಮೀನ್, ಭುವನೇಶ್ ಮೊಗರ್ನಾಡು, ಸಚಿನ್ ಮೆಲ್ಕಾರ್, ನಿತ್ಯಾನಂದ ಸಪಲ್ಯ, ವೇದವ ಗಾಣಿಗ ಹಾಜರಿದ್ದರು.
ಅಂತರರಾಷ್ಟ್ರೀಯ ಮಟ್ಟದ ವೈಟ್ಲಿಫ್ಟರ್ ಆದರ್ಶ್ ಭರತ್ ಗಾಣಿಗ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ವಸಂತ್ ಪಿ.ವಂದಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.