ADVERTISEMENT

ಯಕ್ಷಧ್ರುವದಿಂದ ಕಲಾವಿದರಿಗೆ ಉಚಿತ ಆಹಾರ ಸಾಮಗ್ರಿ: ಮೇ10 ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 12:17 IST
Last Updated 28 ಏಪ್ರಿಲ್ 2021, 12:17 IST

ಮಂಗಳೂರು: ಕೋವಿಡ್‌ ತಡೆ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡ ಕಲಾವಿದರಿಗೆ ಇಲ್ಲಿಯ ‘ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌’ ಈ ಬಾರಿಯೂ ಆಹಾರ ಸಾಮಗ್ರಿ ಮನೆಬಾಗಿಲಿಗೆ ತಲುಪಿಸಲಿದೆ. ಸಂಕಷ್ಟದಲ್ಲಿರುವ ಕಲಾವಿದರು ಮೇ 10ರ ಒಳಗೆ ಸಂಪರ್ಕಿಸಲು ಕೋರಲಾಗಿದೆ.

ಯಕ್ಷಗಾನ ಕಲಾವಿದರು ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ನಿರ್ಬಂಧದಿಂದ ತತ್ತರಿಸಿದಾಗ ಯಕ್ಷಧ್ರುವ ಟ್ರಸ್ಟ್‌ ನೆರವು ನೀಡಿತ್ತು. ಈ ಬಾರಿಯೂ ಲಾಕ್‌ಡೌನ್‌ ಘೋಷಿಸಿದ್ದು, ಮೇಳಗಳ ತಿರುಗಾಟ ಸ್ಥಗಿತವಾಗಿದೆ. ಇನ್ನೂ 4–5 ತಿಂಗಳು ಯಕ್ಷಕಲಾವಿದರು ಕೆಲಸ– ಆದಾಯ ಇಲ್ಲದೆ ಸಂಕಷ್ಟಕ್ಕೀಡಾಗಬಹುದು. ಇದನ್ನು ಗಮನಿಸಿದ ಯಕ್ಷಧ್ರುವ ಸಂಸ್ಥೆ ಯಕ್ಷಗಾನ ಕ್ಷೇತ್ರದ ವೃತ್ತಿನಿರತ ಕಲಾವಿದರ ಕುಟುಂಬ ಹಸಿವಿನಿಂದ ಬಳಲದಂತೆ ನೆರವಾಗಲು ನಿರ್ಧರಿಸಿದೆ. ತೀರಾ ಕಷ್ಟದಲ್ಲಿರುವ ಕಲಾವಿದರಿಗೆ ಆಹಾರ , ದಿನಸಿ ಸಾಮಗ್ರಿಗಳನ್ನು ಅವರ ಮನೆಗೇ ತಲುಪಿಸಲು ಸಂಸ್ಥೆ ನಿರ್ಧರಿಸಿದೆ.

ಕಷ್ಟದಲ್ಲಿರುವ ವೃತ್ತಿ ಕಲಾವಿದರು ಸಮೀಪದ ಯಕ್ಷಧ್ರುವ ಟ್ರಸ್ಟ್‌ ಘಟಕದ ಪದಾಧಿಕಾರಿಗಳನ್ನು ಅಥವಾ ಟ್ರಸ್ಟ್‌ ಸಂಪರ್ಕ ಸಂಖ್ಯೆ 9164521588 / 7411161662 ರಲ್ಲಿ ಮೇ 10ರೊಳಗೆ ಹೆಸರು, ವಿಳಾಸ, ಮೇಳದ ಹೆಸರನ್ನು ನೋಂದಾಯಿಸಬಹುದು ಪ್ರಧಾನ ಕಾರ್ಯದರ್ಶಿ ಕೆ. ಪುರುಷೋತ್ತಮ ಭಂಡಾರಿ ಅಡ್ಯಾರ್‌ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.