
ಬಂಟ್ವಾಳ: ಜಿಲ್ಲೆಯಲ್ಲಿ ಲಾಭದಾಯಕ ತೋಟಗಾರಿಕೆ ಕೃಷಿ ಬಗ್ಗೆ ರೈತರು ಪ್ರಾಮುಖ್ಯತೆ ನೀಡುತ್ತಿದ್ದು, ಸಾಂಪ್ರದಾಯಕ ಭತ್ತದ ಕೃಷಿ ಸಂಸ್ಕೃತಿ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಉಳ್ಳಾಲ ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಕೆ.ದೇವದಾಸ್ ಭಂಡಾರಿ ಹೇಳಿದರು.
ಇಲ್ಲಿನ ಬಿ.ಸಿ. ರೋಡಿನಲ್ಲಿ ನಡೆದ ‘ರಾಷ್ಟ್ರೀಯ ರೈತ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಪದ್ಮರಾಜ್ ಬಲ್ಲಾಳ್ ಮಾವಂತೂರು ಅಧ್ಯಕ್ಷತೆ ವಹಿಸಿದ್ದರು.
13 ರೈತರಿಗೆ ಪಿಎಂ ಕಿಸಾನ್ ಸಮೃದ್ಧಿ ಯೋಜನೆ, ಶೇ 90ರ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕ, 4 ರೈತರಿಗೆ ಪವರ್ ಸ್ಪ್ರೇಯರ್, ಕಿಟ್ ಯೋಜನೆಯಡಿ ಉಚಿತ ಉದ್ದು ದ್ವಿದಳ ಧಾನ್ಯ ಕಿಟ್ ವಿತರಣೆ, 15 ಮಂದಿ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್, ಕೃಷಿ ಹೊಂಡ ನಿರ್ಮಿಸಿದ ರೈತರಿಗೆ ಪ್ರಮಾಣ ಪತ್ರ ವಿತರಿಸಿ, ಕೃಷಿ ಸಖಿಯರನ್ನು ಅಭಿನಂದಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹರೀಶ್ ಶೆಣೈ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ತೋಟಗಾರಿಕಾ ಬೆಳೆ ಬಗ್ಗೆ ಮಾಹಿತಿ ನೀಡಿದರು. ಕೃಷಿಕ ಸಮಾಜದ ಕಾರ್ಯದರ್ಶಿ ಉಮರ್ ಮಂಚಿ, ರಮಾನಾಥ ವಿಟ್ಲ, ಸದಸ್ಯ ಬಿ.ಪದ್ಮಶೇಖರ್ ಜೈನ್, ಉಳ್ಳಾಲ ಕೃಷಿಕ ಸಮಾಜದ ಉಪಾಧ್ಯಕ್ಷ ಜೋಸೆಫ್ ಕುಟಿನ್ಹಾ, ತಾ.ಪಂ. ಇಒ ಸಚಿನ್ ಕುಮಾರ್ ಭಾಗವಹಿಸಿದ್ದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್.ಸ್ವಾಗತಿಸಿ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಕೆ.ಪದ್ಮನಾಭ ರೈ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಅಧಿಕಾರಿ ನಂದನ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.