ಡಿಸಿಆರ್ಇ ಎಸ್ಪಿ ಸೈಮನ್, ಡಿಸಿಪಿ ರವಿಶಂಕರ್ ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ
ಮಂಗಳೂರು: ಮೂಲ್ಕಿ ತಾಲ್ಲೂಕಿನ ಬಳ್ಕುಂಜೆಯಲ್ಲಿ ಈಗಲೂ ಅಸ್ಪ್ರಶ್ಯತೆ ಜೀವಂತವಾಗಿದೆ ಎಂದು ಪರಿಶಿಷ್ಟ ಜಾತಿಯ ಮುಖಂಡರು ಅಧಿಕಾರಿಗಳ ಎದುರು ನೋವು ಹೇಳಿಕೊಂಡರು.
ಭಾನುವಾರ ಇಲ್ಲಿನ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಆಲಿಕೆ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪರಿಶಿಷ್ಟ ಜಾತಿ ಮುಖಂಡ ಜಯ ಕಾಟಿಪಳ್ಳ, ‘ಮೇಲ್ಜಾತಿಯವರಿಗೆ ಸೇರಿದ ಬಾವಿಗಳಿಂದ ನೀರು ಸೇದಲು ಬಳಸುವ ಹಗ್ಗವನ್ನು ಪರಿಶಿಷ್ಟ ಸಮುದಾಯದವರು ಮುಟ್ಟಲು ಅವಕಾಶವಿಲ್ಲ’ ಎಂದರು.
ಮುಂದಿನ ಕುಂದುಕೊರತೆ ಸಭೆಯ ಒಳಗಾಗಿ ಬಳ್ಕುಂಜೆಯಲ್ಲಿ ಪ್ರತ್ಯೇಕ ಸಭೆ ನಡೆಸಿ, ಈ ಬಗ್ಗೆ ಚರ್ಚಿಸಲಾಗುವುದು. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪ್ರತಿನಿಧಿಗಳು ಸಹ ಸಭೆಯಲ್ಲಿ ಭಾಗವಹಿಸುವರು ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್.ಎನ್ ಭರವಸೆ ನೀಡಿದರು.
‘ಶಾಂತಾ ಎಂಬ ಮಹಿಳೆಯ ಮನೆಯ ಚಾವಣಿ ಸಂಪೂರ್ಣ ಕುಸಿದಿದ್ದು, ತಾತ್ಕಾಲಿಕ ಹೊದಿಕೆ ಹಾಕಲಾಗಿದೆ. ದಲಿತ ಸಂಘರ್ಷ ಸಮಿತಿ ಸದಸ್ಯರು ಮಧ್ಯ ಪ್ರವೇಶಿಸುವವರೆಗೂ ಯಾವುದೇ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ’ ಎಂದು ಜಯ ಕಾಟಿಪಳ್ಳ ಆರೋಪಿಸಿದರು.
ವರ್ಷದ ಹಿಂದೆ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಅಭಿವೃದ್ಧಿಗೆ ಶಿಲಾನ್ಯಾಸ ಮಾಡಲಾಗಿದೆ. ಆದರೆ, ಕೆಲಸ ಇನ್ನೂ ಪ್ರಾರಂಭಿಸಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉಳಿದ ಎಲ್ಲ ವೃತ್ತಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಈ ವೃತ್ತವನ್ನು ಮಾತ್ರ ನಿರ್ಲಕ್ಷಿಸಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತರಲಾಗಿದೆ. ಅಂಬೇಡ್ಕರ್ ಅವರ ಪ್ರತಿಮೆಯನ್ನು ವೃತ್ತದ ಮಧ್ಯಭಾಗದಲ್ಲಿ ಸ್ಥಾಪಿಸಬೇಕು, ಮೂಲೆಯಲ್ಲಿ ಅಲ್ಲ ಎಂದು ಒತ್ತಾಯಿಸಿದರು.
ಸಭೆಯಲ್ಲಿ ನಡೆದ ಚರ್ಚೆಯ ನಡಾವಳಿಯನ್ನು ಮಹಾನಗರ ಪಾಲಿಕೆಗೆ ಕಳುಹಿಸಲಾಗುವುದು ಎಂದು ಡಿಸಿಪಿ ಹೇಳಿದರು.
ಪರಿಶಿಷ್ಟ ಸಮುದಾಯದ ಮುಖಂಡ ಎಸ್.ಪಿ. ಆನಂದ್ ಮಾತನಾಡಿ, ಪೌರಕಾರ್ಮಿಕರಾಗಿರುವ ದೇವೇಂದ್ರ ನಾಯಕ್ ಎಂಬುವರು ಹುಲ್ಲು ಕತ್ತರಿಸುವಾಗ ಕಣ್ಣಿಗೆ ಯಂತ್ರದ ತುಣುಕು ಹೋಗಿ ಗಾಯವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯದೆ ಅವರು ಕಣ್ಣು ಕಳೆದುಕೊಳ್ಳುವಂತಾಯಿತು. ಇದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.
ಕರ್ನಾಟಕ ಮೆಡಿಕಲ್ ಕೌನ್ಸಿಲ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ಸಲ್ಲಿಸುವಂತೆ ಡಿಸಿಪಿ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರವೇಶಕ್ಕೆ ಹಾಗೂ ತಮ್ಮ ವಿರುದ್ಧ ಹಿರಿಯ ಅಧಿಕಾರಿಗಳು, ಉನ್ನತ ಹುದ್ದೆಯಲ್ಲಿ ಇರುವವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ವಿಭಾಗದ ಮುಖ್ಯಸ್ಥ ಎಂ.ಪಿ. ಉಮೇಶ್ಚಂದ್ರ ಆರೋಪಿಸಿದರು.
ವೆನ್ಲಾಕ್ನಲ್ಲಿ ಬಡರೋಗಿಗಳಿಗೆ ಐಸಿಯು ಹಾಸಿಗೆ, ವೆಂಟಿಲೇಟರ್ ಕೊರತೆ ಬಳ್ಕುಂಜೆ ಗ್ರಾ.ಪಂ. ಕಚೇರಿಯಲ್ಲಿ ಅಂಬೇಡ್ಕರ್ ಚಿತ್ರ ಇಲ್ಲ: ಆರೋಪ ಅಂಬೇಡ್ಕರ್ ವೃತ್ತ ಕಾಮಗಾರಿ ವಿಳಂಬಕ್ಕೆ ಆಕ್ಷೇಪ
ನಗರದಲ್ಲಿ ಎಸ್ಸಿ ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಯಾವುದೇ ಪ್ರಕರಣ ಇದ್ದಲ್ಲಿ ನೇರವಾಗಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿಗೆ (ಡಿಸಿಆರ್ಇ) ದೂರು ಸಲ್ಲಿಸಬಹುದು.ಸೈಮನ್ ಡಿಸಿಆರ್ಇ ಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.