ADVERTISEMENT

ಪಂಚರಾಜ್ಯಗಳ ಚುನಾವಣೆ | ಛೂ ಮಂತರ್ ಆದ ಕಾಂಗ್ರೆಸ್: ವೇದವ್ಯಾಸ ಕಾಮತ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 6:51 IST
Last Updated 4 ಡಿಸೆಂಬರ್ 2023, 6:51 IST
ವೇದವ್ಯಾಸ ಕಾಮತ್
ವೇದವ್ಯಾಸ ಕಾಮತ್   

ಮಂಗಳೂರು: ‘ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ‘ಡಿಸೆಂಬರ್ 3ರಂದು ಕಾಂಗ್ರೆಸ್ ಛೂ ಮಂತರ್ ಆಗಲಿದೆ’ ಎಂದು ಉಲ್ಲೇಖಿಸಿದ್ದರು. ಅದನ್ನು ಆ ರಾಜ್ಯಗಳ ಜನತೆ ನಿಜಗೊಳಿಸಿದ್ದಾರೆ’ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಹೇಳಿದರು.

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕಾಮತ್‌, ‘ಕಾಂಗ್ರೆಸ್ಸಿನ ಯಾವುದೇ ಸುಳ್ಳು ಗ್ಯಾರಂಟಿಗಳು ಇನ್ನು ಉಪಯೋಗಕ್ಕೆ ಬರುವುದಿಲ್ಲ. ದೇಶದಲ್ಲಿ 2024 ರಲ್ಲೂ ನರೇಂದ್ರ ಮೋದಿ ಅವರೇ ಗ್ಯಾರಂಟಿ ಎಂಬ ಸ್ಪಷ್ಟ ಚಿತ್ರಣ ಗೋಚರಿಸಿದೆ’  ಎಂದರು.

‘ಕರ್ನಾಟಕದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮೋಸ ಮಾಡಿದೆ. ಭರವಸೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಗ್ಯಾರಂಟಿ ಜಾರಿಗೆ ಹತ್ತು ಹಲವು ಷರತ್ತು ಹೇರಿ ಜನರನ್ನು ವಂಚಿಸಿದೆ. ಇದನ್ನು ಸರಿಯಾಗಿ ಅರ್ಥೈಸಿಕೊಂಡ ಬೇರೆ ರಾಜ್ಯಗಳ ಮತದಾರರು ಕಾಂಗ್ರೆಸಿಗೆ ಸರಿಯಾದ ಪಾಠ ಕಲಿಸಿದ್ದಾರೆ’ ಎಂದರು. 

ADVERTISEMENT

‘ಕರ್ನಾಟಕದಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ಸಾಗಿಸಿ, ತೆಲಂಗಾಣದಲ್ಲಿ ಚುನಾವಣೆಗೆ ಕಾಂಗ್ರೆಸ್ ಬಳಸಿಕೊಂಡಿದೆ. ಬಿಆರ್‌ಎಸ್ ಪಕ್ಷದ ಆಡಳಿತ ವಿರೋಧಿ ಅಲೆಯಿಂದಾಗಿ ಅಲ್ಲಿ ಕಾಂಗ್ರೆಸ್‌ ಗೆದ್ದಿರಬಹುದು. ಆದರೆ, ನಮ್ಮ ರಾಜ್ಯದಂತೆಯೇ  ತೆಲಂಗಾಣದಲ್ಲಿಯೂ  ಗ್ಯಾರಂಟಿಗಳನ್ನು ಜಾರಿಗೊಳಿಸದೇ, ಅಲ್ಲಿನ ಜನರಿಗೆ ಮೋಸ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.