ಬಸವಾಪಟ್ಟಣ: ಇಲ್ಲಿನ ಪ್ರಸಿದ್ಧ ಹಜರತ್ ಬಾಬಾ ಬುಡೇನ್ ವಲಿಯವರ ದರ್ಗಾದಲ್ಲಿ ನಡೆದ ಎರಡು ದಿನಗಳ ಸಾಲಾನಾ ತಬ್ಲೀಗಿ ಇಸ್ತೇವಾ ಧಾರ್ಮಿಕ ಬೋಧನಾ ಕಾರ್ಯಕ್ರಮ ಶುಕ್ರವಾರ ರಾತ್ರಿ ಮುಕ್ತಾಯವಾಯಿತು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬೋಧನೆಗಳು ಮತ್ತು ಇಸ್ಲಾಂ ಪವಿತ್ರ ಗ್ರಂಥವಾದ ಕುರ್ ಆನ್ನ ತತ್ವಗಳನ್ನು ಮೌಲ್ವಿಗಳು ಬೋಧಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರು ಉಪನ್ಯಾಸವನ್ನು ಆಲಿಸಿ ಧನ್ಯತಾ ಭಾವ ಮೆರೆದರು ಸಮುದಾಯದ ಮುಖಂಡರಾದ ಎಂ.ಆಲಂಪಾಷಾ ಮತ್ತು ಸೈಯದ್ ಹದಾಯತ್ ತಿಳಿಸಿದರು.
ಇಂದಿನ ಪೀಳಿಗೆಯವರಿಗೆ ಕುರ್ ಆನ್ ಗ್ರಂಥದ ತತ್ವಗಳು ಹಾಗೂ ಪ್ರವಾದಿಯವರ ಬೋಧನೆಗಳನ್ನು ವಿವರಿಸಿ ಮಾನವ ಜನ್ಮದ ಸಾರ್ಥಕತೆಯನ್ನು ಪಡೆಯುವಂತೆ ಪ್ರೇರೇಪಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿ ವರ್ಷ ಏರ್ಪಡಿಸಲಾಗುತ್ತದೆ ಎಂದು ಶಿವಮೊಗ್ಗ ನಿವಾಸಿ ಅಬ್ದುಲ್ ರೆಹಮಾನ್ ಹೇಳಿದರು.
ಹಜರತ್ ಬಾಬಾ ಬುಡೇನ್ ವಲಿಯರ ಗದ್ದುಗೆ ಇರುವ ಪವಿತ್ರ ಸ್ಥಳದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆದದ್ದು ಹಲವರಿಗೆ ಅನುಕೂಲವಾಗಿದೆ ಎಂದು ದಾವಣಗೆರೆಯ ನಜೀರ್ ಅಹಮ್ಮದ್ ಹೇಳಿದರು.
ಶಿವಮೊಗ್ಗ, ಸಾಗರ ಮತ್ತು ಶಿಕಾರಿಪುರದ ಮುಸ್ಲಿಂ ಸಮುದಾಯದವರು ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಿದ್ದರು. ಕೆಲವು ಭಕ್ತರು ಸ್ವಇಚ್ಛೆಯಿಂದ ಎಲ್ಲರಿಗೂ ಕಲ್ಲಂಗಡಿ ಹಣ್ಣು ಮತ್ತು ತಂಪು ಪಾನೀಯವನ್ನು ಉಚಿತವಾಗಿ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.