ADVERTISEMENT

ಬೆಂಚ್ ಪ್ರೆಸ್ ಸ್ಪರ್ಧೆ: 127 ಕೆ.ಜಿ ಎತ್ತಿದ ಸುನಿಲ್

ರಾಜ್ಯಮಟ್ಟದ ಸ್ಪರ್ಧೆಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 3:48 IST
Last Updated 11 ಏಪ್ರಿಲ್ 2021, 3:48 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ‘ಬೆಂಚ್ ಪ್ರೆಸ್’ ಸ್ಪರ್ಧೆಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಶನಿವಾರ ಚಾಲನೆ ನೀಡಿದರು.
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ‘ಬೆಂಚ್ ಪ್ರೆಸ್’ ಸ್ಪರ್ಧೆಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಶನಿವಾರ ಚಾಲನೆ ನೀಡಿದರು.   

ದಾವಣಗೆರೆ: ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 53 ಕೆ.ಜಿ ಜೂನಿಯರ್ ವಿಭಾಗದಲ್ಲಿ ಬೀರೇಶ್ವರ ಜಿಮ್‌ನ ಸುನಿಲ್ ಬಿ. 127.5 ಕೆ.ಜಿ. ಭಾರವನ್ನು ಎತ್ತುವ ಮೂಲಕ ಗಮನ ಸೆಳೆದರು.

ಉಳಿದಂತೆ ಮಂಗಳೂರಿನ ಕಾರ್ತಿಕ್ (100 ಕೆ.ಜಿ) ಸಾಲಿಗ್ರಾಮದ ವೀರಮೂರ್ತಿ (95 ಕೆ.ಜಿ) ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.

ಗ್ರೂಪ್ ಆಫ್ ಐರನ್ ಗೇಮ್ಸ್‌ ಸಂಸ್ಥೆಯಿಂದ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಸಹ
ಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ADVERTISEMENT

ವಿವಿಧ ವಿಭಾಗಗಳಲ್ಲಿ ವಿಜೇತರು:59 ಕೆಜಿ: ಸಾಲಿಗ್ರಾಮದ ವೀರಮಾರುತಿ (100 ಕೆ.ಜಿ), ಮಂಗಳೂರಿನ ಎಚ್.ಹಾಲೇಶ್ (87.5 ಕೆ.ಜಿ) ದಾವಣಗೆರೆಯ ಬೀರೇಶ್ವರ ಜಿಮ್‌ನ ಬೈರೇಶ್ ಡಿ. (85 ಕೆ.ಜಿ)

66 ಕೆಜಿ ವಿಭಾಗ: ಸಾಲಿಗ್ರಾಮದ ಶಶಾಂಕ್ (142.5 ಕೆ.ಜಿ.), ಪ್ರಜ್ವಲ್ ದೇವಾಡಿಗ (142.5 ಕೆ.ಜಿ), ಹೊಸಪೇಟೆಯ ಜೈ ಶರಣ, (112 ಕೆ.ಜಿ)

74 ಕೆ.ಜಿ ವಿಭಾಗ: ಸಾಲಿಗ್ರಾಮದ ಶರತ್ ಕುಮಾರ್ (135 ಕೆ.ಜಿ), ಮಂಗಳೂರಿನ ಕೀರ್ತಿರಾಜ್ (125 ಕೆ.ಜಿ), ದಾವಣಗೆರೆಯ ಬೀರೇಶ್ವರ ಜಿಮ್‌ನ ಮನೋಜ್‌ರಾಜ್ ಟಿ.ಎನ್ (125 ಕೆ.ಜಿ.)

83 ಕೆ.ಜಿ ವಿಭಾಗ: ಮಂಗಳೂರಿನ ರೋಹನ್ ಕೆ. (155 ಕೆ.ಜಿ), ಮಂಗಳೂರಿನ ಪತಂಜಲಿ ಬಲ್ಲಾಳ್‌ (122 ಕೆ.ಜಿ), ದಾವಣಗೆರೆಯ ಜಿಐಜಿಯ ಸಂತೋಷ್‌ ಕುಮಾರ್ ಎಂ, (120 ಕೆ.ಜಿ)

93 ಕೆ.ಜಿ. ವಿಭಾಗ: ಕಿನ್ನಿಗೋಳಿಯ ನಿಶಾಂತ್ (157 ಕೆಜಿ), ಬೀರೇಶ್ವರ (140 ಕೆ.ಜಿ) ಮಂಗಳೂರಿನ ರಂಜಿತ್ ಜಿ. (130 ಕೆ.ಜಿ)

‘ಬುದ್ಧಿ ಚುರುಕುಗೊಳ್ಳಲು ಕ್ರೀಡೆಗಳು ಅವಶ್ಯ’

ಮನುಷ್ಯನ ಬುದ್ಧಿ ಚುರುಕುಗೊಳ್ಳಲು ಹಾಗೂ ದೇಹದಲ್ಲಿ ಸಮತೋಲನ ಕಾಯ್ದುಕೊಳ್ಳಲು ಕ್ರೀಡೆಗಳು ಅವಶ್ಯಕ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯಪಟ್ಟರು.

ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಾವಣಗೆರೆ ಕುಸ್ತಿ ಹಾಗೂ ವೇಯ್ಟ್ ಲಿಫ್ಟಿಂಗ್‌ಗೆ ಹೆಸರುವಾಸಿಯಾದ ಊರು. ಇಲ್ಲಿನ ಆಜಾದ್‌ನಗರ ಠಾಣೆಯ ಪಿಎಸ್‌ಐ ಶೈಲಜಾ ಅವರು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಶಿಕ್ಷಣದಲ್ಲಿ ಆಸಕ್ತಿ ಇದ್ದರೆ ಈ ದೇಶದಲ್ಲಿ ಅತ್ಯುನ್ನತ ಸ್ಥಾನ ಪಡೆಯಬಹುದು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಕೊರೊನಾ ಎರಡನೇ ಅಲೆ ಆರಂಭ
ವಾಗಿದ್ದು, ಇಂತಹ ಸಮಯದಲ್ಲಿ ಕ್ರೀಡೆಯನ್ನು ನಡೆಸುವುದು ಸವಾಲಿನ ಕೆಲಸ. ಕೊರೊನಾ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ನೀವು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಕೆಪಿಎಲ್‌ಎ ಕಾರ್ಯದರ್ಶಿ ಸತೀಶ್‌ ಕುಮಾರ್ ಕುದ್ರೋಳಿ, ಆಜಾದ್‌ ನಗರ ಠಾಣೆಯ ಪಿಎಸ್‌ಐ ಕೆ.ಎನ್.ಶೈಲಜಾ, ವಿದ್ಯಾನಗರ ಠಾಣೆಯ ಎಸ್‌ಐ ರೂಪಾ ತೆಂಬದ್, ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಪಿ.ಜಿ. ಪಾಂಡುರಂಗಯ್ಯ, ಜಿಲ್ಲಾ ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಎಚ್. ಮಹೇಶ್, ಕಬಡ್ಡಿ ಕ್ರೀಡಾಪಟು ಎಚ್. ಷರೀಫ್, ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ಇದ್ದರು. ಗ್ರೂಪ್ ಆಫ್ ಐರನ್ ಗೇಮ್ಸ್ ಅಧ್ಯಕ್ಷ ಎಚ್.ದಾದಾಪೀರ್
ಸ್ವಾಗತಿಸಿದರು.

200 ಕ್ರೀಡಾಪಟುಗಳು

ರಾಜ್ಯದ ದಕ್ಷಿಣ ಕನ್ನಡ, ಕುಂದಾಪುರ, ಉಡುಪಿ, ಶಿವಮೊಗ್ಗ,
ಬೆಂಗಳೂರು, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಉತ್ತರ ಕನ್ನಡ ಜಿಲ್ಲೆಗಳಿಂದ
200ರಿಂದ 300 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಜೂನಿಯರ್, ಸಬ್‌ ಜೂನಿಯರ್, ಸೀನಿಯರ್, ಮಾಸ್ಟರ್ಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆದವು.

‘ಈ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಅರ್ಹತೆಯ ಆಧಾರದಲ್ಲಿ ಏ. 27ರಿಂದ 30ರವರೆಗೆ ಗೋವಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಪುರುಷರು ಮತ್ತು ಮಹಿಳೆಯರು ಸೇರಿ 36 ಮಂದಿಯನ್ನು ಆಯ್ಕೆ ಮಾಡಿ ಕಳುಹಿಸಲಾಗುವುದು’ ಎಂದು ಗ್ರೂಪ್ ಆಫ್ ಐರನ್ ಗೇಮ್ಸ್ ಸಂಸ್ಥೆಯ ಅಧ್ಯಕ್ಷ ದಾದಾಪೀರ್
ಹೇಳಿದರು.

ಏಕಲವ್ಯ ಪ್ರಶಸ್ತಿ ವಿಜೇತ ಸತೀಶ್ ಕುಮಾರ್ ಕುದ್ರೋಳಿ, ರಾಷ್ಟ್ರೀಯ ಕ್ರೀಡಾಪಟು ಎಂ.ಮಹೇಶ್ವರಯ್ಯ, ಮಂಗಳೂರಿನ ಜಯರಾಂ, ಉಮೇಶ್ ಗಟ್ಟಿ, ಎಂ.ಎಸ್ ಷಣ್ಮುಖ, ಕೆ.ಕುಮಾರ್, ಕೆ. ಗಂಗಪ್ಪ, ಹರಿಹರದ ವೀರಭದ್ರಪ್ಪ ರೆಫರಿಯಾಗಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.