ADVERTISEMENT

ದಾವಣಗೆರೆ: ಶೇ 99.9ರಷ್ಟು ಬೆಳೆ ಪರಿಹಾರ ವಿತರಣೆ

ಹೆಕ್ಟೇರ್ ಮಳೆಯಾಶ್ರಿತ ಬೆಳೆಗೆ ₹ 6,800 l ನೀರಾವರಿ ಬೆಳೆಗೆ ₹ 13,500 ಪರಿಹಾರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 19:30 IST
Last Updated 3 ಫೆಬ್ರುವರಿ 2020, 19:30 IST
ಶರಣಪ್ಪ ಮುದಗಲ್
ಶರಣಪ್ಪ ಮುದಗಲ್   

ದಾವಣಗೆರೆ: 2019ರ ಅತಿವೃಷ್ಟಿಯಿಂದಾಗಿ ದಾವಣಗೆರೆ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿತ್ತು. ಇದೀಗ ಶೇ 99.9ರಷ್ಟು ಫಲಾನುಭವಿಗಳಿಗೆ ಪರಿಹಾರ ತಲುಪಿದೆ.

ಜಿಲ್ಲೆಯಲ್ಲಿ 5,430 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಒಟ್ಟು 8,159 ಅರ್ಹ ಫಲಾನುಭವಿಗಳಲ್ಲಿ 8,151 ಮಂದಿಗೆ ₹ 9 ಕೋಟಿ (9,23,54,882) ಪರಿಹಾರ ವಿತರಿಸಲಾಗಿದೆ. (2020 ಜ. 27ರ ವರೆಗೆ) ಒಂದು ಹೆಕ್ಟೇರ್ ಮಳೆಯಾಶ್ರಿತ ಬೆಳೆಗೆ ₹ 6,800 ಮತ್ತು ನೀರಾವರಿ ಬೆಳೆಗೆ ₹ 13,500 ಪರಿಹಾರ ವಿತರಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 36,957 ಮಂದಿ ಅರ್ಹ ಫಲಾನುಭವಿಗಳಿದ್ದಾರೆ. ಅದರಲ್ಲಿ 36,490 ಮಂದಿಗೆ ₹ 30 ಕೋಟಿ (30,28,48,830) ಪರಿಹಾರ ವಿತರಿಸಲಾಗಿದೆ. (2020 ಜ. 27ರವರೆಗೆ) ಇದೀಗ ಶೇ 98.7 ರಷ್ಟು ಫಲಾನುಭವಿಗಳಿಗೆ ಪರಿಹಾರ ತಲುಪಿದೆ.

ADVERTISEMENT

ಜಗಳೂರು ತಾಲ್ಲೂಕಿನಲ್ಲಿ 1.4 ಹೆಕ್ಟೇರ್ ಶೇಂಗಾ ಬೆಳೆ ಹಾನಿಯಾಗಿದ್ದು, ಚನ್ನಗಿರಿ ತಾಲ್ಲೂಕಿನಲ್ಲಿ 485 ಹೆಕ್ಟೇರ್ ಸೂರ್ಯಕಾಂತಿಗೆ ಹಾನಿಯಾಗಿದೆ. ರಾಗಿ ಬೆಳೆ ಹೊನ್ನಾಳಿ ತಾಲ್ಲೂಕಿನಲ್ಲಿ 101 ಹೆಕ್ಟೇರ್, ಚನ್ನಗಿರಿ ತಾಲ್ಲೂಕಿನಲ್ಲಿ 8 ಹೆಕ್ಟೇರ್, ಹೊನ್ನಾಳಿ ತಾಲ್ಲೂಕಿನಲ್ಲಿ 29 ಹೆಕ್ಟೇರ್, ಜಗಳೂರು ತಾಲ್ಲೂಕಿನಲ್ಲಿ 0.1 ಹೆಕ್ಟೇರ್ ಸಿರಿಧಾನ್ಯ (millets) ಬೆಳೆ ಹಾನಿಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

‘ಮೆಕ್ಕೆಜೋಳ ಬೆಳೆ ಪರಿಹಾರಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಬೆಳೆ ಹಾನಿ ಕುರಿತು ದಾಖಲೆಗಳನ್ನು ಸಲ್ಲಿಸಿದ್ದೆ. ಇದುವರೆಗೂ ಬಂದಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಬರುತ್ತೆ ಎಂದೇ ಹೇಳುತ್ತಿದ್ದಾರೆ. ಆದರೆ ಇದುವರೆಗೂ ಬಂದಿಲ್ಲ’ ಎನ್ನುತ್ತಾರೆ ಸುರಹೊನ್ನೆ ಗ್ರಾಮದ ರೈತರಾದ ಬಸವರಾಜ್, ಬಸವಲಿಂಗಪ್ಪ, ಆರುಂಡಿ ಗ್ರಾಮದ ರೈತರಾದ ಈಶ್ವರಪ್ಪ, ಮಹೇಶ್ವರಪ್ಪ.

‘ಸರ್ಕಾರ ಒಂದು ಹೆಕ್ಟೇರ್ ಮಳೆಯಾಶ್ರಿತ ಬೆಳೆಗೆ ₹ 6,800 ಮತ್ತು ನೀರಾವರಿ ಬೆಳೆಗೆ ₹ 13,500 ಪರಿಹಾರ ನೀಡುತ್ತದೆ. ಒಂದು ಎಕರೆಯಲ್ಲಿ ಯಾವುದೇ ಬೆಳೆ ಬೆಳೆದರೂ ₹ 20 ಸಾವಿರಕ್ಕಿಂತ ಹೆಚ್ಚು ಖರ್ಚು ಬರಲಿದೆ. ಆದರೆ ಸರ್ಕಾರ ನೀಡುವ ಪರಿಹಾರ ಅತ್ಯಲ್ಪ. ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಯುವ ರೈತ ಪ್ರಶಾಂತ್ ಎನ್. ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.