
ಸೈಬರ್ ವಂಚನೆ
ಜಗಳೂರು: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸೈಬರ್ ಅಪರಾಧಗಳು ಶೇ 30ರಷ್ಟು ಕಡಿಮೆಯಾಗಿದ್ದು, ವಂಚಕರಿಂದ ₹ 10 ಕೋಟಿ ವಸೂಲಾತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಸೋಮವಾರ ಭೇಟಿ ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹೂಡಿಕೆ ನೆಪದಲ್ಲಿ ಅಕ್ಷರಸ್ಥರೇ ಹೆಚ್ಚಾಗಿ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಜಿಲ್ಲೆಯಲ್ಲಿ 69 ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದರು.
‘ಮನೆ ಮನೆಗೆ ಪೋಲೀಸ್ ಜಾಗೃತಿ ಅಭಿಯಾನದಿಂದ ಗ್ರಾಮೀಣ ಭಾಗದಲ್ಲಿನ ಅಪರಾಧ ಪ್ರಕರಣಗಳು ಹಾಗೂ ಕೌಟುಂಬಿಕ ಸಮಸ್ಯೆಗಳು ತ್ವರಿತವಾಗಿ ಇತ್ಯರ್ಥವಾಗುತ್ತಿವೆ’ ಎಂದರು.
‘ಜಿಲ್ಲೆಯಲ್ಲಿ 4.5 ಲಕ್ಷ ಮನೆಗಳಿದ್ದು, ಶೇ 78 ರಷ್ಟು ಮನೆಗಳಿಗೆ ಭೇಟಿ ನೀಡಿಲಾಗಿದೆ. ಅನೇಕ ಕಳವು, ನಾಪತ್ತೆ ಪ್ರಕರಣ ಪತ್ತೆಯಾಗಿವೆ. ದಲಿತ ಕಾಲೊನಿಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಲಾಗುತ್ತಿದೆ. ಜನಸಾಮಾನ್ಯರಲ್ಲಿ ಪೊಲೀಸ್ ಬಗ್ಗೆ ನಂಬಿಕೆ ಗಟ್ಟಿಗೊಳ್ಳುತ್ತಿದೆ’ ಎಂದು ಮಾಹಿತಿ ನೀಡಿದರು.
‘ಪಟ್ಟಣದಲ್ಲಿ 18 ಪೊಲೀಸ್ ವಸತಿ ಗೃಹಗಳಿವೆ. ಕೆಲವು ಶಿಥಿಲಾವಸ್ಥೆಯಲ್ಲಿದ್ದು, ಹೆಚ್ಚುವರಿಯಾಗಿ 24 ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
‘ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಪೊಲೀಸ್ ನಿಯೋಜಿಸಬೇಕು. ವಸತಿಶಾಲೆಗಳಲ್ಲಿ ಪೋಕ್ಸೊ, ಬಾಲ್ಯವಿವಾಹ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸಬೇಕು. ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದರು.
ಡಿವೈಎಸ್ಪಿ ಬಸವರಾಜ್, ಸಿಪಿಐ ಸಿದ್ದರಾಮಯ್ಯ, ಪಿಎಸ್ಐಗಳಾದ ಗಾದಿಲಿಂಗಪ್ಪ, ಆಶಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.