ಕಡರನಾಯ್ಕನಹಳ್ಳಿ: ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಅಂದಾಜು 70 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳ್ಳುಳ್ಳಿ ಫಸಲು ಜಮೀನಿನಲ್ಲೇ ಕೊಳೆತಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.
ಈ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಬಾರಿ ಬೆಳ್ಳುಳ್ಳಿ ಬೆಳೆಯ ಪ್ರದೇಶ ಅಧಿಕವಾಗಿತ್ತು. ಆದರೆ, ನಿರಂತರ ಮಳೆಯ ಪರಿಣಾಮ ಬೆಳೆ ನೀರಲ್ಲಿ ಹಾಳಾಗಿದ್ದು, ರೈತರು ಮಾಡಿದ್ದ ಖರ್ಚು ಹಾಗೂ ಶ್ರಮ ನೀರುಪಾಲಾಗಿದೆ.
‘ಎಕರೆಗೆ ಅಂದಾಜು ₹ 22,000 ಖರ್ಚು ಮಾಡಿದ್ದೆ. ಸರಿಯಾಗಿ ಫಸಲು ಕೈಗೆ ಸಿಕ್ಕಿದ್ದರೆ ಎಕರೆಗೆ ₹ 50,000ದಿಂದ ₹ 60,000 ಆದಾಯ ಸಿಗುವ ನಿರೀಕ್ಷೆಯಿತ್ತು. ಮಳೆಯಿಂದಾಗಿ ಬೆಳೆ ಸಂಪೂರ್ಣ ನಷ್ಟವಾಗಿದೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಹೊಸಳ್ಳಿಯ ರೈತರಾದ ಅಶೋಕ ರೆಡ್ಡಿ, ಸಂಜೀವ ರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದೆ. ಸೂಕ್ತ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು’ ಎಂದು ಮಲೇಬೆನ್ನೂರು ಸಹಾಯಕ ತೋಟಗಾರಿಕಾ ಅಧಿಕಾರಿ ಜಿ.ಆರ್. ಸಂತೋಷ್ ಮತ್ತು ಗ್ರಾಮಾಡಳಿತಾಧಿಕಾರಿ ಸೌಮ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.