ದಾವಣಗೆರೆ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತಪರ ನಿಲುವು ಹೊಂದಿದ್ದರೂ ದಲ್ಲಾಳಿಗಳು ಹಾಗೂ ಕಮಿಷನ್ ಏಜೆಂಟರು ರಾಜಕೀಯ ದುರುದ್ದೇಶದಿಂದ ರೈತರ ಮುಖವಾಡ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಆರೋಪಿಸಿದರು.
‘ಶತಮಾನದಷ್ಟು ಹಳೆಯ ಕಾಯ್ದೆಯಲ್ಲೇ ರೈತರ ಭವಿಷ್ಯವನ್ನು ಕಟ್ಟುವುದು ಕಷ್ಟ. ಅವತ್ತಿನ ಕಾಲಘಟ್ಟಕ್ಕೆ ಆ ಕಾಯ್ದೆ ಸರಿಹೋಗುತ್ತಿತ್ತು. ಆದರೆ ಇಂದು ಉತ್ಪಾದನೆ, ತಂತ್ರಜ್ಞಾನ, ನೀರಾವರಿ ವ್ಯವಸ್ಥೆ ಎಲ್ಲವೂ ಬದಲಾಗಿದ್ದು, ಇದನ್ನೇ ಇಟ್ಟುಕೊಂಡು ರೈತರ ಬದುಕನ್ನು ರೂಪಿಸುವುದು ಕಷ್ಟ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನೂತನ ಕಾಯ್ದೆಗಳಿಂದರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಬಿಜೆಪಿಯ ಸರಣಿ ಗೆಲುವಿನಿಂದ ಹತಾಶೆಗೊಂಡಿರುವ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ರೈತರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದು, ಬಂದ್ ಹಿಂದೆ ಈ ಪಕ್ಷಗಳ ಕೈವಾಡವಿದೆ’ ಎಂದು ದೂರಿದರು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಅನೇಕ ಯೋಜನೆ
ಗಳನ್ನು ತಂದಿದ್ದು, ರಸಗೊಬ್ಬರದ ಕೊರತೆ ನೀಗಿಸಲು ಬೇವು ಲೇಪಿತ ಯೂರಿಯಾ, 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಸುಧಾರಣೆ, ಕಿಸಾನ್ ಕಾರ್ಡ್ ವಿತರಣೆ, ಸಾಯಿಲ್ ಹೆಲ್ತ್ ಕಾರ್ಡ್, ಫಸಲ್ ಬಿಮಾ ಯೋಜನೆ, ಕಿಸಾನ್ ಸಮ್ಮಾನ್ ಸೇರಿ ಹಲವು ರೈತಪರ ಯೋಜನೆಗಳನ್ನು ಜಾರಿಗೊಳಿಸಿದರೂ ಕೇಂದ್ರದ ವಿರುದ್ಧ ವಿರೋಧ ಪಕ್ಷಗಳು ಅನಗತ್ಯ ವಿಷಯಗಳನ್ನು ಹೇಳಿ ರೈತರ ದಾರಿ ತಪ್ಪಿಸುತ್ತಿವೆ’ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಬಿ.ಎಸ್. ಜಗದೀಶ್, ನಾಗರಾಜ್ ಲೋಕಿಕೆರೆ, ಶಿವಶಂಕರ್, ಮಂಜಾ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.